ಕಲಬುರಗಿ: ಪೊಲೀಸ್ ಕಮಿಷನರ್ ವೈ.ಎಸ್. ರವಿಕುಮಾರ್ ಮತ್ತು ಇವರ ಪತ್ನಿ ರೂಪಾಲಿ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ದೂರು ಸಲ್ಲಿಸಿದ್ದಾರೆ.
ಕಮಿಷನರ್ ಮತ್ತು ಕಮಿಷನರ್ ಪತ್ನಿ ಇಬ್ಬರೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಬ್ಲ್ಯಾಕ್ಮೇಲ್ ಮಾಡಿ ನನ್ನಿಂದ 3 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಸಾಲದು ಎಂಬಂತೆ ಮತ್ತೆ 3 ಲಕ್ಷ ಹಣಕ್ಕೆ ರೂಪಾಲಿ ಬೇಡಿಕೆ ಇಟ್ಟರು. ಹಣಕೊಡಲಿಲ್ಲ ಎಂದು ನನ್ನನ್ನು ಗಡಿಪಾರು ಮಾಡಿದರು ಎಂದು ಮಣಿಕಂಠ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.
ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ, ಜೀವ ಬೆದರಿಕೆ ಸೇರಿದಂತೆ ಹಲವು ಕೇಸ್ಗಳಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ರನ್ನು ಕಲಬುರಗಿಯಿಂದ ಒಂದು ವರ್ಷ ಗಡಿಪಾರು ಮಾಡಿ ಸೆ.30ರಂದೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್.ರವಿಕುಮಾರ್ ಆದೇಶ ಹೊರಡಿಸಿದ್ದರು.
ಇದಾದ ಬಳಿಕ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವುದಾಗಿ ಮಣಿಕಂಠ ರಾಠೋಡ್ ಹೇಳಿಕೆ ನೀಡಿದ್ದರು. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಣಿಕಂಠ ರಾಠೋಡ್ನ ಬಂಧನಕ್ಕೆ ಆಗ್ರಹಿಸಿ ಕಲಬುರಗಿ ಎಸ್ಪಿ ಕಚೇರಿ ಮುಂಭಾಗ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಕೂಡ ನಡೆಸಿತ್ತು. ನ.13ರಂದು ಹೈದ್ರಾಬಾದ್ನಲ್ಲಿ ಮಣಿಕಂಠ ರಾಠೋಡ್ನನ್ನು ಕಲಬುರಗಿಯ ಬ್ರಹ್ಮಪುರ ಪೊಲೀಸರು ಬಂಧಿಸಿದ್ದರು.
ಇದೀಗ ಕಲಬುರಗಿ ಕಮಿಷನರ್ ಮತ್ತು ಅವರ ಪತ್ನಿ ವಿರುದ್ಧವೇ ಮಣಿಕಂಠ ರಾಠೋಡ್ ಲಂಚದ ಆರೋಪ ಮಾಡಿದ್ದಾರೆ. ದಾಂಡಿಯಾ ನೈಟ್ ಇವೆಂಟ್ ಸಲುವಾಗಿ ರೂಪಾಲಿ ರವಿಕುಮಾರ್ 3 ಲಕ್ಷ ಹಣ ಪಡೆದಿದ್ದರು. ಮತ್ತಷ್ಟು ಹಣಕ್ಕೆ ಡಿಮಾಂಡ್ ಮಾಡಿದ್ದರು. ಕೊಡಲಿಲ್ಲ ಎಂದು ಗಡಿಪಾರು ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗಡಿಪಾರು: ಒಂದು ವರ್ಷ ಕಲಬುರಗಿಗೆ ಕಾಲಿಡುವಂತಿಲ್ಲ