More

    ಜಿಲ್ಲಾದ್ಯಂತ ಫಸಲ್ ಬಿಮಾ ಬೆಳೆ ವಿಮೆ ಮಾಹಿತಿ ಪ್ರಚಾರ

    ಶಿವಮೊಗ್ಗ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ-ಮುಂಗಾರು 2023ರ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೋಮವಾರ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

    ಕೃಷಿ ಇಲಾಖೆ ಹಾಗೂ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್‌ನಿಂದ ಈ ವಾಹನ ಜಿಲ್ಲೆಯಲ್ಲಿ 15 ದಿನ ಬೆಳೆ ವಿಮೆ ಕುರಿತು ಪ್ರಚಾರ ಕೈಗೊಳ್ಳಲಿದೆ. ಸೋಮವಾರ ಶಿವಮೊಗ್ಗ ತಾಲೂಕಿನಾದ್ಯಂತ ಪ್ರಚಾರ ಕೈಗೊಂಡಿದ್ದು, ಮಂಗಳವಾರದಿಂದ ಭದ್ರಾವತಿ, ಶಿಕಾರಿಪುರ, ಸೊರಬ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಸಂಚರಿಸಿ ಬೆಳೆ ವಿಮೆ ಕುರಿತು ರೈತರಿಗೆ ಮಾಹಿತಿ ನೀಡಲಿದೆ.
    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಸುಕಿನ ಜೋಳ(ನೀರಾವರಿ)ಕ್ಕೆ ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ 64,500 ರೂ. ಹಾಗೂ ಮುಸುಕಿನ ಜೋಳ(ಮಳೆಯಾಶ್ರಿತ) ವಿಮಾ ಮೊತ್ತ 56,500 ರೂ.ಆಗಿದ್ದು ನೋಂದಣಿಗೆ ಜು.31 ಕೊನೆ ದಿನವಾಗಿದೆ. ಭತ್ತ (ನೀರಾವರಿ)ಕ್ಕೆ ವಿಮಾ ಮೊತ್ತ 93,250 ರೂ., ಭತ್ತ(ಮಳೆಯಾಶ್ರಿತ) ವಿಮಾ ಮೊತ್ತ 63,750 ರೂ., ರಾಗಿ(ಮಳೆಯಾಶ್ರಿತ) 42,500 ರೂ. ಮತ್ತು ಜೋಳ(ಮಳೆಯಾಶ್ರಿತ)ಕ್ಕೆ ವಿಮಾ ಮೊತ್ತ 38,250 ರೂ.ಆಗಿದ್ದು ಪ್ರತಿ ಬೆಳೆಗೆ ರೈತರ ವಿಮಾ ಕಂತು ಶೇ.2 ಆಗಿರುತ್ತದೆ.
    ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಕಟ್ಟಲು ತಮ್ಮ ಖಾತೆ ಇರುವ ಹತ್ತಿರವಿರುವ ವಾಣಿಜ್ಯ, ಗ್ರಾಮೀಣ, ಸಹಕಾರ ಬ್ಯಾಂಕನ್ನು ಅಥವಾ ಸಿಎಸ್‌ಸಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು. ರೈತರು ನಿಗದಿತ ಅರ್ಜಿಯನ್ನು ಪೂರ್ಣವಾಗಿ ತುಂಬಬೇಕು. ಪಹಣಿ, ಪಾಸ್ ಪುಸ್ತಕ, ಕಂದಾಯ ರಸೀದಿ ಅಥವಾ ಖಾತೆ ಪತ್ರ ಇತ್ಯಾದಿ ನೀಡಬೇಕು.
    ಇದೇ ವೇಳೆ ಫಸಲ್ ಬಿಮಾ ಯೋಜನೆ ಕುರಿತಾದ ಮಾಹಿತಿಯುಳ್ಳ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಕೃಷಿ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್‌ನ ಶಿವಮೊಗ್ಗ ಜಿಲ್ಲಾ ಸಂಯೋಜಕಿ ಭೂಮಿಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts