ನವದೆಹಲಿ: ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿ ಗಡಿಯಲ್ಲಿ ಬಿಡಾರ ಹೂಡಿಕೊಂಡು ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದ ರೈತ ಮುಖಂಡರು, ಕೊನೆಗೂ ತಮ್ಮ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ. ಮೋದಿ ಸರ್ಕಾರವು ವಿವಾದಿತ ಕಾನೂನುಗಳನ್ನು ರದ್ದು ಮಾಡಿ, ಇತರ ಬೇಡಿಕೆಗಳನ್ನು ಪೂರೈಸುವುದಾಗಿ ನೀಡಿದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ, ಇಂದು, ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನವೆಂಬರ್ 19 ರ ಗುರು ನಾನಕ್ ಜಯಂತಿ ದಿನದಂದು ಪ್ರಧಾನಿ ನರೇಂದ್ರ ಮೋದಿ ವಿವಾದಿತ ಕಾನೂನುಗಳನ್ನು ಹಿಂಪಡೆಯುವ ಘೋಷಣೆ ಮಾಡಿ, ಪ್ರತಿಭಟನಾಕಾರರಿಗೆ ಮನೆಗೆ ಮರಳಲು ಮನವಿ ಮಾಡಿದ್ದರು. ನವೆಂಬರ್ 29 ರಂದು ಸಂಸತ್ತಿನ ಎರಡೂ ಮನೆಗಳು ಮೂರು ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಅಂಗೀಕರಿಸಿದ್ದವು. ಕಳೆದ ಮಂಗಳವಾರದಂದು, ಕೇಂದ್ರ ಸರ್ಕಾರವು ಕಿಸಾನ್ ಮೋರ್ಚಾದ ಐದು ಸದಸ್ಯರ ಸಮಿತಿಗೆ ಅವರ ಉಳಿದ ಬೇಡಿಕೆಗಳನ್ನು ಪೂರೈಸುವ ಬಗ್ಗೆ ಕರಡು ಪ್ರಸ್ತಾವನೆ ಕಳುಹಿಸಿತ್ತು. ಈ ಪ್ರಸ್ತಾವನೆಗಳನ್ನು ಬುಧವಾರ ರೈತ ನಾಯಕರು ಸರ್ವಾನುಮತದಿಂದ ಒಪ್ಪಿಕೊಂಡಿದ್ದು, ಇಂದು ಮಧ್ಯಾಹ್ನ ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ ರಾಕೇಶ್ ತಿಕಾಯತ್ ಉಪಸ್ಥಿತಿಯಲ್ಲಿ ನಡೆದ ಅಂತಿಮ ಸಭೆಯಲ್ಲಿ ತಮ್ಮ ಧರಣಿ ಸತ್ಯಾಗ್ರಹಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ಮತ್ತು ದೆಹಲಿ ಗಡಿಗಳಲ್ಲಿ ಸಾವಿರಾರು ಹರಿಯಾಣ, ಪಂಜಾಬ್, ಉತ್ತರಾಖಂಡ, ಉತ್ತರಪ್ರದೇಶ ಮತ್ತು ದೇಶದ ಇತರ ಭಾಗಗಳಿಂದ ಬಂದ ರೈತರು ಬಿಡಾರ ಹೂಡಿದ್ದರು. ಕೃಷಿ ಕಾನೂನುಗಳ ರದ್ದತಿಯೊಡನೆ, ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಭರವಸೆ, ವಿದ್ಯುತ್ ಸಂಬಂಧಿತ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವುದು, ರೈತರ ವಿರುದ್ಧದ ಕೇಸುಗಳನ್ನು ವಾಪಸ್ ಪಡೆಯುವುದು ಹಾಗೂ ಹೋರಾಟದ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವುದು ಮುಂತಾದ ಕೆಲವು ಬೇಡಿಕೆಗಳನ್ನು ಮೋರ್ಚಾ ಮಂಡಿಸಿತ್ತು. ಕೇಂದ್ರ ಸರ್ಕಾರ ರೈತರಿಗೆ ಅನುಕೂಲಕರ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದೆ ಎನ್ನಲಾಗಿದೆ.
Farmers start removing tents from their protest site in Singhu on Delhi-Haryana
"We are preparing to leave for our homes, but the final decision will be taken by Samyukt Kisan Morcha," a farmer says pic.twitter.com/rzRjPkPfE1
— ANI (@ANI) December 9, 2021
ಪ್ರತಿಭಟನಾ ಸ್ಥಳದಲ್ಲಿ ರೈತರು ನಿರ್ಮಿಸಿದ್ದ ಟೆಂಟ್ಗಳನ್ನು ತೆಗೆಯುತ್ತಿದ್ದ ಹಲವು ದೃಶ್ಯಗಳು ಅದಾಗಲೇ ವರದಿಯಾಗುತ್ತಿವೆ. ದೆಹಲಿ ಗಡಿ ಪ್ರದೇಶವನ್ನು ತೆರವುಗೊಳಿಸಲು ಕೆಲವು ದಿನಗಳ ಕಾಲಾವಕಾಶ ಬೇಕಾಗಬಹುದು. ಶನಿವಾರ(ಡಿ.11) ಎಲ್ಲಾ ರೈತರೂ ಮನೆಗೆ ತೆರಳಲಿದ್ದಾರೆ ಎಂದು ರೈತ ಮುಖಂಡ ದರ್ಶನ್ ಪಾಲ್ ಸಿಂಗ್ ಹೇಳಿದ್ದಾರೆ. ಪ್ರತಿಯೊಬ್ಬರೂ ಮನೆ ತಲುಪುವವರೆಗೂ ಘಾಜಿಯಾಬಾದ್ನಲ್ಲೇ ಇದ್ದು ಪರಿಸ್ಥಿತಿಯನ್ನು ಗಮನಿಸುವೆ ಎಂದು ಮೋರ್ಚಾದ ಮುಖ್ಯಸ್ಥ ರಾಕೇಶ್ ತಿಕಾಯತ್ ಹೇಳಿದ್ದಾರೆ. (ಏಜೆನ್ಸೀಸ್)
ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥ ಯಾರು? ಕೇಂದ್ರ ಸಂಪುಟ ಸಮಿತಿಯ ಮಹತ್ವದ ಸಭೆ