ಅರಕಲಗೂಡು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಲ್ಲಿಪಟ್ಟಣ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಕಟ್ಟೆಪುರ ಏತ ನೀರಾವರಿ ಯೋಜನೆ ಪ್ರಾರಂಭಗೊಂಡು 10 ವರ್ಷ ಕಳೆದರೂ, ಕೇವಲ ಕೊಳವೆ ಪೈಪ್ಗಳನ್ನು ಹೂತಿರುವುದನ್ನು ಬಿಟ್ಟರೆ ಇದುವರೆಗೂ ರೈತರ ಜಮೀನಿಗೆ ನೀರು ಹರಿಸಿಲ್ಲ. ಯಾವುದೇ ಕೆರೆಕಟ್ಟೆಗಳನ್ನೂ ತುಂಬಿಸದ ಪರಿಣಾಮ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. ರೈತರ ಪಂಪ್ ಸೆಟ್ಗಳಿಗೆ ಅಕ್ರಮ-ಸಕ್ರಮ ವಿದ್ಯುತ್ ಸಂಪರ್ಕ ಯೋಜನೆ ಮುಂದುವರಿಸಬೇಕು. ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ರೈತರಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಪರಿವರ್ತಕಗಳು (ಟಿ.ಸಿ) ಕೆಟ್ಟು ಹೋದರೆ ಹೊಳೆನರಸೀಪುರಕ್ಕೆ ಹೋಗಿ ರಿಪೇರಿ ಮಾಡಿಸಿಕೊಳ್ಳಬೇಕಿದೆ. ಆದ್ದರಿಂದ ಟಿ.ಸಿ.ರಿಪೇರಿ ಘಟಕವನ್ನು ಅರಕಲಗೂಡಿನಲ್ಲೇ ತೆರೆಯಬೇಕು. ಪ್ರತಿದಿನ 8 ಗಂಟೆ ಸಮರ್ಪಕವಾಗಿ ವಿದ್ಯುತ್ ನೀಡಬೇಕು. ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯರ ಕೊರತೆ ಇದ್ದು, ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ತೊಂದರೆಯಾಗಿದೆ. ಕೂಡಲೇ ಖಾಲಿ ಇರುವ ಪಶುವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಬಸವರೆಡ್ಡಪ ರೋಣದ ಅವರು ಮನವಿ ಪತ್ರ ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.