ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸರ್ಕಾರದ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿರುವ ಸಂಬಂಧ ಪ್ರಕರಣವೊಂದು ಶಿವಮೊಗ್ಗದ ಸಿಇಎನ್ ಠಾಣೆ ಮೆಟ್ಟಿಲೇರಿದೆ.
ಮಧು ಬಂಗಾರಪ್ಪ ಜಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹೆಸರಿನ ಫೇಸ್ಬುಕ್ ಗ್ರೂಪ್ ಕ್ರಿಯೇಟ್ ಮಾಡಲಾಗಿದ್ದು ಸೋಮವಾರ(ನ.27) ನಕಲಿ ಫೇಸ್ಬುಕ್ ಖಾತೆ ಬೆಳಕಿಗೆ ಬಂದಿದೆ.
ಗ್ರೂಪ್ನ ಡಿಪಿಯಲ್ಲಿ ಮಧು ಬಂಗಾರಪ್ಪ ಅವರ ಫೋಟೊ ಅಪ್ಲೋಡ್ ಮಾಡಿದ್ದು, ಆ ಖಾತೆಯನ್ನು 58 ಸಾವಿರ ಮಂದಿ ಫಾಲೋ ಮಾಡಿದ್ದಾರೆ. ಕುಂದಾಪುರ ವಿರಾಟ್ ಹೆಸರಿನಲ್ಲಿ ಅಚ್ಛೇ ದಿನ್ ವಿಚಾರವಾಗಿ ಸಚಿವರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಪೋಸ್ಟ್ ಹಾಕಿದ್ದಾರೆ.
ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೆಸ್ನ ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ದರು. ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ ಎಂದು ಬರೆದು ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿರುವ ವಿಡಿಯೋ ಹಾಕಿ ಅವಹೇಳನ ಮಾಡಲಾಗಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್ಗಳನ್ನು ನಕಲಿ ಫೇಸ್ಬುಕ್ ಗ್ರೂಪ್ಗೆ ಟ್ಯಾಗ್ ಕೂಡ ಮಾಡಲಾಗಿದೆ.
ಈ ಸಂಬಂಧ ನಕಲಿ ಅಕೌಂಟ್ ಕ್ರಿಯೆಟ್ ಮಾಡಿ ಸಚಿವರಿಗೆ ಕೆಟ್ಟ ಹೆಸರು ಬರುವಂತೆ, ಅವರ ಘನತೆಗೆ ಧಕ್ಕೆ ತರುವಂತೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಐಟಿ ಆ್ಯಕ್ಟ್ನಡಿ ಕೇಸ್ ಕೂಡ ದಾಖಲಾಗಿದೆ.