ನವದೆಹಲಿ: ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬ ಯುವತಿಯ ಮೇಲೆ ದೌರ್ಜನ್ಯ ಎಸಗುತ್ತಿರುವ ಮನ ಕದಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಿಂದುಗಳೇ ಅಲ್ಪಸಂಖ್ಯಾತರಾಗಿರುವ ಕೇರಳದಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಬರೆದು ವೈರಲ್ ಮಾಡಲಾಗಿದೆ.
ವಿಡಿಯೋದಲ್ಲಿ ಯುವಕ ಯುವತಿಯನ್ನು ಬೆತ್ತಲೆಗೊಳಿಸಲು ಯತ್ನಿಸುತ್ತಾನೆ ಮತ್ತು ಆಕೆಯ ಸ್ಥಿತಿಯನ್ನು ನೋಡಿ ನಗುತ್ತಾನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡು ಎಂದು ಯುವತಿ ಕೇಳಿಕೊಂಡರು ಆತ ಬಿಡುವುದೇ ಇಲ್ಲ. ಈ ವೇಳೆ ಆಕೆಯನ್ನು ರಕ್ಷಿಸಲು ಮತ್ತೊಬ್ಬ ಯುವತಿ ಯತ್ನಿಸುತ್ತಾಳೆ. ಅಲ್ಲದೆ, ವಿಡಿಯೋದಲ್ಲಿ ಇನ್ನಿತರ ಯುವಕರ ಧ್ವನಿಯು ಕೇಳುತ್ತದೆ.
ಈ ಸುದ್ದಿಯ ಅಸಲಿಯತ್ತು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ಫ್ಯಾಕ್ಟ್ಚೆಕ್ ನಡೆಸಿದ್ದು, ವಿಡಿಯೋ ಅಪಪ್ರಚಾರದ ಭಾಗವಾಗಿದೆ ಎಂದು ತಿಳಿದುಬಂದಿದೆ. ಸದ್ಯ ವೈರಲ್ ಆಗಿರುವ ವಿಡಿಯೋ 3 ವರ್ಷ ಹಳೆಯದು. ಈ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿತ್ತು. ಯುವತಿಯ ಬಾಯ್ಫ್ರೆಂಡ್ ಮತ್ತು ಆತನ ಸ್ನೇಹಿತರಿಂದಲೇ ಈ ಕೃತ್ಯ ನಡೆದಿತ್ತು.
ಇದನ್ನೂ ಓದಿ: ಸಿಸಿಬಿ ರೇಡ್ಗೂ ಮುನ್ನ ಮೂರು ದಿನಗಳಿಂದ ನೆರೆಹೊರೆಯವರ ಜತೆ ಸಂಜನಾ ಮೀಟಿಂಗ್ ನಡೆಸಿದ್ದೇಕೆ?
ಆದರೆ, ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿ ಹಿಂದಿಯಲ್ಲಿ ಅಡಿಬರಹ ಬರೆದುಕೊಂಡಿದ್ದು, ಅದರ ಸಾರ ಹೀಗಿದೆ. ಕೇರಳದಲ್ಲಿ ಹುಡುಗಿಯ ಮೇಲೆ ದೌರ್ಜನ್ಯ ಮಾಡುತ್ತಿರುವ ದೃಶ್ಯ ಇದೇ ಮೊದಲೇನಲ್ಲ. ಹಿಂದುಗಳೇ ಅಲ್ಪಸಂಖ್ಯಾತರಾಗಿರುವ ಕೇರಳದಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿವೆ ಎಂದು ಬರೆದುಕೊಂಡಿದ್ದು, ವೈರಲ್ ಮಾಡಿದ್ದಾರೆ.
ಆದರೆ, ತದನಂತರದಲ್ಲಿ ಟ್ವಿಟರ್ ಬಳಕೆದಾರ ವಿಡಿಯೋ ಡಿಲೀಟ್ ಮಾಡಿದ್ದರೂ ವಿಡಿಯೋ ಮಾತ್ರ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಅಲ್ಲದೆ, ಸುಪ್ರೀಂಕೋರ್ಟ್ ವಕೀಲ ಮತ್ತು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಸಹ ರೀಟ್ವೀಟ್ ಮಾಡಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ರಾಷ್ಟ್ರೀಯ ಮಹಿಳಾ ರಕ್ಷಣಾ ಆಯೋಗವನ್ನು ಕೇಳಿದ್ದಾರೆ.
ಇನ್ವಿಡ್ (ವಿಡಿಯೋ ವೇರಿಫಿಕೇಶನ್) ವೇದಿಕೆ ಮೂಲಕ ವಿಡಿಯೋ ಕುರಿತು ಹುಡುಕಾಡಿದಾಗ ವೆಬ್ಸೈಟ್ ಒಂದರಲ್ಲಿ 2017ರ ಸೆಪ್ಟೆಂಬರ್ನಲ್ಲಿ ಈ ಸಂಬಂಧ ವರದಿ ಪ್ರಕಟವಾಗಿರುವುದು ಬೆಳಕಿಗೆ ಬಂದಿದೆ. ಘಟನೆ 2017ರ ಆಗಸ್ಟ್ ತಿಂಗಳಲ್ಲಿ ಆಂಧ್ರದ ಪ್ರಕಾಶಂ ಜಿಲ್ಲೆಯ ಕನಿಗಿರಿ ಪಟ್ಟಣದಲ್ಲಿ ನಡೆದಿತ್ತು.
ವರದಿಯ ಪ್ರಕಾರ ಘಟನೆ ನಡೆದ ಸಂದರ್ಭದಲ್ಲಿ ಯುವತಿಗೆ 19 ವರ್ಷ ವಯಸ್ಸಾಗಿತ್ತು. ಆಕೆ ವಿದ್ಯಾರ್ಥಿನಿಯಾಗಿದ್ದು, ಬಾಯ್ಫ್ರೆಂಡ್ ಸಾಯ್ನಿಂದಲೇ 2017ರ ಆಗಸ್ಟ್ 29ರಂದು ಲೈಂಗಿಕ ದೌರ್ಜನ್ಯ ನಡೆದಿತ್ತು. ಸಾಯ್ ಸ್ನೇಹಿತರಾದ ಕಾರ್ತಿಕ್ ಮತ್ತು ಪವನ್ ದೌರ್ಜನ್ಯವನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಮೂವರನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಬಂಧಿಸಲಾಗಿತ್ತು.
ಸಂತ್ರಸ್ತ ಯುವತಿಯು ಸೇಹಿತೆ ಜತೆ ಬಾಯ್ಫ್ರೆಂಡ್ ಸಾಯ್ ಭೇಟಿ ಮಾಡಲು ಹೋದಾಗ ಘಟನೆ ನಡೆದಿತ್ತು. ಸಾಯ್ಗೂ ಮೊದಲೇ ಆಕೆಗೆ ಕಾರ್ತಿಕ್ ಜತೆ ಸಂಬಂಧ ಇತ್ತು ಎನ್ನಲಾಗಿದೆ. ಸಾಯ್ ದೌರ್ಜನ್ಯ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ಕಾರ್ತಿಕ್ ತನ್ನೊಂದಿಗಿನ ಸಂಬಂಧ ಕಡಿದುಕೊಂಡ ದ್ವೇಷಕ್ಕೆ ಸಾಯ್ಗೆ ಪ್ರೋತ್ಸಾಹ ನೀಡುತ್ತಿದ್ದ.
ಕೇರಳದಲ್ಲಿ ಹಿಂದುಗಳು ಅಲ್ಪಸಂಖ್ಯಾತರೇ?
2011ರ ಜನಗಣತಿ ಪ್ರಕಾರ ಕೇರಳದಲ್ಲಿ ಹಿಂದುಗಳ ಸಂಖ್ಯೆ ಶೇ. 54.7 ರಷ್ಟಿದೆ. ಉಳಿದಂತೆ ಮುಸ್ಲಿಮರು ( ಶೇ. 26.5) ಮತ್ತು ಕ್ರಿಶ್ಚಿಯನ್ನರು ಶೇ.18.3 ರಷ್ಟಿದ್ದಾರೆ. ಹೀಗಾಗಿ ಕೇರಳದಲ್ಲಿ ಹಿಂದುಗಳು ಅಲ್ಪಸಂಖ್ಯಾತರು ಎಂಬುದು ಸುಳ್ಳು. ಇನ್ನು ವಿಡಿಯೋ ಕುರಿತು ಹೇಳುವುದಾದರೆ ವೈರಲ್ ವಿಡಿಯೋಗೂ ಕೇರಳಕ್ಕೂ ಸಂಬಂಧವೇ ಇಲ್ಲ. ಈ ಇಲ್ಲ ನಿಜಾಂಶ ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ. (ಏಜೆನ್ಸೀಸ್)
ಲಡಾಖ್ ಗಡಿಯಲ್ಲಿ ಗುಂಡಿನ ಸದ್ದು- 45 ವರ್ಷಗಳ ನಂತರ ಫೈರಿಂಗ್! ಕದನದ ಮುನ್ಸೂಚನೆ?