ಬೆಂಗಳೂರು: ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ನನಗೆ ಹೋಗಬಾರದು ಎಂದು ಪೊಲೀಸರು ನೋಟಿಸ್ ಕೊಟ್ಟಿದ್ದರು. ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಅವಕಾಶಕೊಡದಂತೆ ಏರ್ ಟ್ರಾಫಿಕ್ ಕಂಟ್ರೋಲರ್ಗೆ ಆದೇಶ ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಮಂಗಳೂರು ಪೊಲೀಸರು ಏಕಾಏಕಿ ಗೋಲಿಬಾರ್ ಮಾಡಿ ಇಬ್ಬರು ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ರಮೇಶ್ ಕುಮಾರ್ ನೇತೃತ್ವದ ಕಾಂಗ್ರೆಸ್ ಶಾಸಕರ ನಿಯೋಗವನ್ನೂ ವಿಮಾನ ನಿಲ್ದಾಣದಿಂದ ಆಚೆ ಬರಲೂ ಬಿಡಲಿಲ್ಲ. ಇದು ನಮ್ಮ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದರು.
ನಾನು ಪ್ರತಿಪಕ್ಷ ನಾಯಕ. ಗೋಲಿಬಾರ್ ಆದ ಸಂದರ್ಭದಲ್ಲಿ ನಾನು ಅಲ್ಲಿಗೆ ಭೇಟಿ ನೀಡಬೇಕಿತ್ತು. ಏಕೆಂದರೆ ಪ್ರತಿಪಕ್ಷ ನಾಯಕನಾಗಿ ಅದು ನನ್ನ ಹಕ್ಕು. ಆದರೆ, ಅಲ್ಲಿಗೆ ಹೋಗೋಕೆ ನನ್ನನ್ನ ಬಿಡಲಿಲ್ಲ. ನೀವು ಬರಬಾರದು ಅಂತ ನೊಟೀಸ್ ಕೊಡ್ತಾರೆ. ಇದು ಪ್ರತಿಪಕ್ಷ ನಾಯಕನ ಹಕ್ಕನ್ನೇ ಕಿತ್ತುಕೊಂಡಿದ್ದಾರೆ ಎಂದು ದೂರಿದರು.
ಬೀದರ್ನಲ್ಲಿ ಸಿಎಎ ವಿರುದ್ಧ ನಾಟಕದಲ್ಲಿ ಪೌರತ್ವ ಪಡೆಯಬೇಕಾದರೆ ನಿಮ್ಮ ತಾತ, ಅಜ್ಜಿಯ ದಾಖಲೆ ಕೊಡಬೇಕು ಎಂಬ ಸಂಭಾಷಣೆ ಇದೆ. ಇದನ್ನು 11 ವರ್ಷದ ನಾಟಕ ಪಾತ್ರಧಾರಿ ವಿದ್ಯಾರ್ಥಿನಿ ಹೇಳ್ತಾಳೆ. ದಾಖಲೆ ಕೇಳಿದವರನ್ನ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎನ್ನುತ್ತಾಳೆ. ಅದಕ್ಕೆ ರಾಜದ್ರೋಹ ಹಾಕಲಾಗಿದೆ.
ಮಾಸ್ಟರ್ ಹಿರಣ್ಣಯ್ಯ ಅವರು ಎಷ್ಟೊಂದು ವಿಡಂಬನೆ ಮಾಡಿದ್ದಾರೆ. ಆದರೆ ಯಾವುದಾದರೂ ಕೇಸ್ ಹಾಕಿದ್ದಾರಾ? ಆ ವಿದ್ಯಾರ್ಥಿನಿ ತಾಯಿ ಕೂಲಿ ಕೆಲಸದವರು. ಅವರ ತಂದೆ ಕ್ಯಾನ್ಸರ್ ಬಂದು ಸತ್ತುಹೋಗಿದ್ದಾರೆ ಎಂದು ಸದನಕ್ಕೆ ತಿಳಿಸಿದರು.