ಹರಪನಹಳ್ಳಿ: ನಿರಂತರ ಮಳೆ ಸುರಿಯುತ್ತಿದ್ದು, ಪ್ರತಿಯೊಬ್ಬರು ಕಾಯಿಸಿ ಆರಿಸಿದ ನೀರು ಕುಡಿಯಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷೃವಹಿಸಬಾರದು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 15ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಆರೋಗ್ಯ ವಿಚಾರಿಸಿ ಸೋಮವಾರ ಮಾತನಾಡಿದರು. ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಮುನ್ನೆಚ್ಚರಿಕೆವಹಿಸಬೇಕು. ತಹಸೀಲ್ದಾರ್, ತಾಪಂ ಅಧಿಕಾರಿಗಳಿಗೆ ಶುದ್ದ ನೀರನ್ನು ಒದಗಿಸುವಂತೆ ಸೂಚಿಸಿದರು.
ಇದನ್ನೂ ಓದಿ: ಕುಂದಾಪುರದಲ್ಲಿಲ್ಲ ನೀರಿನ ಸಮಸ್ಯೆ
ಜಿಪಂ ಸಿಇಒ ಬಿ.ಸದಾಶಿವ ಪ್ರಭು ಗ್ರಾಮಕ್ಕೆ ಭೇಟಿ ನೀಡಿ, ವಾಂತಿ-ಭೇದಿ ಭಾದಿತರ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿದರು. ಗ್ರಾಮದ ವಿವಿಧೆಡೆ ಕುಡಿವ ನೀರಿನ ಪೈಪ್ ಲೈನ್, ನೀರಿನ ಓವರ್ ಹೆಡ್ ಟ್ಯಾಂಕ್, ನಲ್ಲಿಗಳು, ಚರಂಡಿಗಳ ಸ್ವಚ್ಛತೆಯನ್ನು ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಜಿಪಂನ ಯೋಜನಾ ನಿರ್ದೇಶಕ ಅಶೋಕ್ ತೋಟದ್, ತಹಸೀಲ್ದಾರ್ ಶಿವಕುಮಾರ ಬಿರಾದಾರ, ತಾಲೂಕು ಆರೋಗ್ಯ ಅಧಿಕಾರಿ ಹಾಲಮೂರ್ತಿ, ವೈದ್ಯರಾದ ಶಂಕರನಾಯ್ಕ, ದತ್ತಾತ್ರೇಯ, ರಾಜೇಶ್, ಪಿಡಿಒ ಚಂದ್ರನಾಯ್ಕ ಎಲ್, ನಂದಿಬೇವೂರು ಪಿಡಿಒ ಶಾಂತಪ್ಪ, ಐಇಸಿ ಸಂಯೋಜಕ ವಸಿಗೇರಪ್ಪ ಹಾಗೂ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಶೇಖರ್, ಸದಸ್ಯರು, ಸಿಬ್ಬಂದಿ ಇದ್ದರು.