ಮಸ್ಕಿ: ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು. ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ಮಸ್ಕಿ ತಾಲೂಕು ಘಟಕ ಅಸ್ತಿತ್ವಕ್ಕೆ ಬಂದು, ಪ್ರಥಮ ಬಾರಿಗೆ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಇದು ಸಂತಸದ ವಿಷಯವಾಗಿದ್ದು, ಇದಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡುವೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಮಾತನಾಡಿ, ಫೆ.14ರಂದು ಸಮ್ಮೇಳನ ನಡೆಯಲಿದ್ದು, ಅಂದು ಬೆಳಗ್ಗೆ 8 ಗಂಟೆಗೆ ಪರಿಷತ್ ಜಿಲ್ಲಾಧ್ಯಕ್ಷ ಬಸವಪ್ರಭು ಪಾಟೀಲ್ ರಾಷ್ಟ್ರ ದ್ವಜಾರೋಹಣ ನೇರವೇರಿಸುವರು. ನನ್ನಿಂದ ಪರಿಷತ್ ದ್ವಜಾರೋಹಣ ನಡೆಯುವುದು. ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಬ್ದುಲ್ ಖಾದರ್ ಜಿಲಾನಿ ಖಾಜಿ, ಸೇಂಟ್ ಜಾನ್ ಚರ್ಚ್ ಫಾದರ್ ಚಾರ್ಲ್ಸ್ ಸುಂದರರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪ್ರಕಾಶ ಮಸ್ಕಿ ಇದ್ದರು.
ರಾಯಚೂರು ವಿವಿ ಕುಲಪತಿಯಿಂದ ಉದ್ಘಾಟನೆ
ಮಸ್ಕಿ ತಾಲೂಕು ಮಟ್ಟದ ಪ್ರಥಮ ಸಮ್ಮೇಳನವನ್ನುಯ ರಾಯಚೂರು ವಿವಿ ಕುಲಪತಿ ಹರೀಶ ರಾಮಸ್ವಾಮಿ ಉದ್ಘಾಟಿಸಲಿದ್ದರೆ, 8.30ಕ್ಕೆ ನಡೆಯಲಿರುವ ಸಮ್ಮೇಳನಾಧ್ಯಕ್ಷೆ ಮೆರವಣಿಗೆಗೆ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಚಾಲನೆ ನೀಡುವರು. ಸಂತೆಕಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಜಿ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮನೋಹರ್ ಮಸ್ಕಿ, ಶರಣಪ್ಪ ಮಟ್ಟೂರು, ಮಾಜಿ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ ಪಾಲ್ಗೊಳ್ಳುವರು. ಪುಸ್ತಕ ಮಳಿಗೆಯನ್ನು ತಾಪಂ ಅಧ್ಯಕ್ಷ ಶಿವಣ್ಣ ನಾಯಕ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಕಲಾಪ್ರದರ್ಶನವನ್ನು ಪುರಸಭೆ ಉಪಾಧ್ಯಕ್ಷೆ ಕವಿತಾ ಮಾಟೂರು ಉದ್ಘಾಟಿಸುವರು.