ಬೆಂಗಳೂರು: ವರುಣನ ಆರ್ಭಟದಿಂದಾಗಿ ನೂರಾರು ವಾಹನಗಳು ನೀರಿನಲ್ಲಿ ಮುಳುಗಿ ಮಾಲೀಕರಿಗೆ ಇನ್ಶೂರೆನ್ಸ್ ಸಿಗುತ್ತೋ ಇಲ್ಲವೋ ಎಂಬ ಭಯ ಶುರುವಾಗಿದೆ. ಮಳೆ ನೀರಲ್ಲಿ ಮುಳುಗಿದ ಕಾರು ಅಥವಾ ವಾಹನಕ್ಕೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಡೆದಿದ್ದರೆ ಮಾತ್ರ ಕ್ಲೇಮ್ ಆಗುತ್ತದೆ. ಅಂದರೆ ಫಸ್ಟ್ ಪಾರ್ಟಿಯಾಗಿದ್ದರಷ್ಟೇ ವಿಮೆ ಹಣ ಬರುತ್ತದೆ. ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಡೆದಿದ್ದರೆ ನೀರಲ್ಲಿ ಮುಳುಗಿದ ವಾಹನಕ್ಕೆ ಕ್ಲೇಮ್ ಸಿಗುವುದಿಲ್ಲ. ಪ್ರಕೃತಿ ವಿಕೋಪದ ಅಡಿಯಲ್ಲಿ ಇನ್ಶೂರೆನ್ಸ್ ಕ್ಲೇಮ್ ಆಗುತ್ತದೆ. ಇದಕ್ಕೆ ಎಫ್ಐಆರ್ ಅಥವಾ ಪೊಲೀಸರ ದೂರಿನ ಪ್ರತಿ ಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಇದು ಸರಳೀಕರಣ ಇನ್ಶೂರೆನ್ಸ್ ಕ್ಲೇಮ್ ಆಗಿರುತ್ತದೆ. ಅಪಾರ್ಟ್ವೆುಂಟ್, ರಸ್ತೆಯಲ್ಲಿ ವಾಹನಗಳಲ್ಲಿ ನೀರು ತುಂಬಿರುವ ಫೋಟೋಗಳನ್ನು ತೆಗೆದಿಟ್ಟುಕೊಳ್ಳಬೇಕು. ಇನ್ಶೂರೆನ್ಸ್ ಡಿಕ್ಲರೈಡ್ ವ್ಯಾಲ್ಯೂ ಅದರ ಮೇಲೆ ಕ್ಲೇಮ್ ಕೊಡಲಾಗುತ್ತದೆ. ಪ್ರವಾಹವನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಎ ವರ್ಗ ( ಫ್ಲೋರ್ ಲೆವಲ್), ಬಿ ವರ್ಗ (ಸೀಟ್ ಲೆವಲ್), ಸಿ ವರ್ಗ (ಡ್ಯಾಶ್ ಬೋರ್ಡ್ ಲೆವಲ್) ಆಗಿರುತ್ತದೆ. ಡ್ಯಾಶ್ ಬೋರ್ಡ್ ಲೆವಲ್ ನೀರು ನಿಂತಿದ್ದಾಗ ಇಗ್ನೀಶನ್ ಆನ್ ಮಾಡಬಾರದು. ಒಂದು ವೇಳೆ ಆನ್ ಮಾಡಿದರೆ ಇಂಜಿನ್ ಡ್ಯಾಮೇಜ್ ಆಗುವುದರ ಜತೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಕೂಡ ಹಾಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಟೋ ಮಾಡಿಸಿಕೊಂಡು ಹೋಗಿ ಶೋ ರೂಮ್ಗೆ ಕೊಂಡೊಯ್ಯಬೇಕು ಎಂದು ಕಲ್ಯಾಣಿ ಮೋಟಾರ್ಸ್ನ ಸೀನಿಯರ್ ಜನರಲ್ ಮ್ಯಾನೇಜರ್ (ಸರ್ವೀಸ್) ಸುರೇಶ್ ಭಟ್ ತಿಳಿಸಿದ್ದಾರೆ.
ಕ್ಲೇಮ್ಗೆ ಈ ಅಂಶಗಳನ್ನು ಪಾಲಿಸಿ
* ನೀರಲ್ಲಿ ಮುಳುಗಿದ ಕಾರು/ ವಾಹನದ ಇಗ್ನೀಶನ್ ಕೀ ಆನ್ ಮಾಡಬೇಡಿ. ಇಗ್ನೀಶನ್ ಕೀ ಆನ್ ಮಾಡಿದರೆ ಇಂಜಿನ್ ಡ್ಯಾಮೇಜ್ ಆಗಿ ಇನ್ಶೂರೆನ್ಸ್ ಕ್ಲೇಮ್ ಆಗುವುದಿಲ್ಲ
* ನಿಮ್ಮ ಕಾರು/ ವಾಹನದ ಮುಳುಗಡೆಯಾಗಿರುವ ಫೋಟೋ/ ವಿಡಿಯೋ ತೆಗೆದು ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಿ.
* ಇನ್ಶೂರೆನ್ಸ್ ಕಂಪನಿಯ ಸೂಚನೆಗಳನ್ನು ತಪ್ಪದೆ ಪಾಲಿಸಿ
* ನೀರಲ್ಲಿ ಮುಳುಗಿದ್ದ ಕಾರು/ ವಾಹನಗಳನ್ನು ಟೋ ಮಾಡಿಸಿಕೊಂಡು ಹೋಗಿ ಶೋ ರೂಮ್ಗೆ ಅಥವಾ ಗ್ಯಾರೇಜ್ಗೆ ಬಿಡಿ
ಅಸೆಂಬ್ಲಿ ವಾರ್ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್
ಜೀವರಕ್ಷಕ ಸೀಟ್ ಬೆಲ್ಟ್ಗಳು ಹೇಗೆ ರಕ್ಷಿಸುತ್ತವೆ? ಇಲ್ಲಿದೆ ಸಂಪೂರ್ಣ ವಿವರ…
ಸಮಗ್ರ ಯೋಜನೆ ಬೇಕು: ಅತಿವೃಷ್ಟಿ ನಿರ್ವಹಣೆಯಲ್ಲಿ ಇಚ್ಛಾಶಕ್ತಿ ಪ್ರದರ್ಶನ ಅಗತ್ಯ..