ಶಿಕಾರಿಪುರ: ಪ್ರಭು ಶ್ರೀರಾಮಚಂದ್ರ ಶ್ರದ್ಧೆಯ ಸಂಕೇತ. ನಾಡಿನುದ್ದಕ್ಕೂ ಶ್ರೀ ರಾಮಚಂದ್ರ ಸಂಚರಿಸಿದ ಬಗ್ಗೆ ಉಲ್ಲೇಖಗಳಿವೆ. ಪ್ರಭು ಶ್ರೀರಾಮ ನಮ್ಮ ಆದರ್ಶ ಪುರುಷ ಎಂದು ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ತೊಗರ್ಸಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಗೆ ಪೂರಕವಾಗಿ ಶ್ರೀ ವಿಠಲ ರಕುಮಾಯಿ ದೇವಸ್ಥಾನದಲ್ಲಿ ಸೋಮವಾರ ಅಕ್ಷತಾ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಗಳು, ಸಾಧು-ಸಂತರ, ಋಷಿ-ಮುನಿಗಳ ಶತಮಾನಗಳ ತಪಸ್ಸು ಇಂದು ಫಲಿಸಿದೆ. ಕೋಟ್ಯಂತರ ಭಕ್ತರ ಕನಸು ನನಸಾಗಿದೆ. ಅಯೋಧ್ಯೆಯಿಂದ ಬಂದಿರುವ ಈ ಪವಿತ್ರವಾದ ಅಕ್ಷತೆಯ ಮೂಲಕ ನಾಡಿನ ಭಕ್ತರನ್ನು ಜ.22ರ ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಆಹ್ವಾನಿಸಲಾಗುತ್ತಿದೆ. ಇದು ಈ ಮಣ್ಣಿನ ಪರಂಪರೆ, ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಕೇತ ಎಂದು ಹೇಳಿದರು.
ಇದೀಗ ಅಯೋಧ್ಯೆ ನಗರವು ಶ್ರೀರಾಮನ ಆಡಳಿತದಲ್ಲಿದ್ದ ಅಯೋಧ್ಯೆಯಂತೆ ಶ್ರೀರಾಮನ ಆಡಳಿತದಲ್ಲಿದ್ದಂತೆ ಪಾರಂಪರಿಕವಾದ ಶೃಂಗಾರಗಳಿಂದ, ಅಲಂಕಾರಗಳಿಂದ ಕಂಗೊಳಿಸುತ್ತಿದೆ. ಭಾರತದ ಜನತೆಯ ಹೃದಯಾಳದಲ್ಲಿ ಶ್ರೀರಾಮ ವಿರಾಜಮಾನನಾಗಿದ್ದಾನೆ. ಶ್ರೀರಾಮ ನಾಮಸ್ಮರಣೆಯಿಂದ ಶ್ರೀ ಸಾಮಾನ್ಯನೊಬ್ಬ ವಾಲ್ಮೀಕಿ ಮಹರ್ಷಿಯಾದ ಎಂದರು.
ಶ್ರೀ ಪಾಂಡುರಂಗ ರಕುಮಾಯಿ ದೇವಸ್ಥಾನದ ಅರ್ಚಕ ಸತ್ಯನಾರಾಯಣ ರಾವ್ ನಾಡಿಗೇರ್, ಭೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸಣ್ಣ ಹನುಮಂತಪ್ಪ, ಗ್ರಾಪಂ ಅಧ್ಯಕ್ಷ ಎಸ್.ನಿರಂಜನ್, ಮಾಜಿ ಅಧ್ಯಕ್ಷ ಜೆ.ಪರಮೇಶ್ವರಪ್ಪ, ಪ್ರಮುಖರಾದ ಮೃತ್ಯುಂಜಯ ಸ್ವಾಮಿ, ಚನ್ನವೀರಸ್ವಾಮಿ, ದಾಮೋದರ್, ಹರೀಶ್ ಹೆಬ್ಬಾರೆ, ಮೃತ್ಯುಂಜಯ ಹಿರೇಮಠ, ಪುಟ್ಟಯ್ಯ, ಅನಿಲ್, ಮುರುಗೇಶ್, ರುದ್ರಪ್ಪ ರಾಜು ಇತರರಿದ್ದರು.