ಶಿವಮೊಗ್ಗ: ಲೋಕಸಭೆ ಚುನಾವಣೆ ಘೋಷಣೆ ಆದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕಾಗಿ ಸೋಮವಾರ ಶಿವಮೊಗ್ಗಕ್ಕೆ ಬಂದರೆ, ಇತ್ತ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡು ದಿನವಿಡೀ ಮಠ, ಮಂದಿರಗಳನ್ನು ಸುತ್ತಿದರು.
ಬೆಳಗ್ಗೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಅವರ ದಿನಚರಿ ಜಿಲ್ಲೆಯ 10ಕ್ಕೂ ಅಧಿಕ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಕೆಲ ಬೆಂಬಲಿಗರೊಂದಿಗೆ ಕೋಟೆ ಸೀತಾರಾಮಂಜನೇಯ ಸ್ವಾಮಿ ದರ್ಶನ ಪಡೆದರು. ಬಳಿಕ ಭದ್ರಾವತಿಯ ಬಿಳಕಿ ರಾಚೋಟೇಶ್ವರ ಮಠ, ಗೋಣಿಬೀಡು, ತೊಗರ್ಸಿ, ಸೊರಬ ಜಡೆ ಮಠ ಸೇರಿ ಹತ್ತಕ್ಕೂ ಅಧಿಕ ಮಠಗಳಿಗೆ ತೆರಳಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಬೆಂಬಲ ನೀಡುವಂತೆ ಮತ್ತು ಆಶೀರ್ವದಿಸುವಂತೆ ಕೋರಿದರು.
ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುವರೆಂಬ ನಂಬಿಕೆ ಬಿಜೆಪಿ ನಾಯಕರಲ್ಲಿತ್ತು. ಹಾಗಾಗಿ ಬ್ಯಾನರ್ನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಾಲಿನಲ್ಲಿ ಈಶ್ವರಪ್ಪ ಫೋಟೋ ವೇದಿಕೆ ಗಣ್ಯರ ಪಟ್ಟಿಯಲ್ಲೂ ಅವರ ಹೆಸರಿತ್ತು ಎನ್ನಲಾಗಿದೆ. ಆದರೆ ಬಹಿರಂಗ ಸಭೆಯಿಂದ ಈಶ್ವರಪ್ಪ ದೂರವೇ ಉಳಿದರು.