ಸಾಗರ: ಮಕ್ಕಳ ಸಂತೆಯಂತಹ ಚಟುವಟಿಕೆ ಸೃಜನಶೀಲತೆಗೆ ಪ್ರೇರಕವಾಗುತ್ತದೆ. ಮಕ್ಕಳಲ್ಲಿ ವ್ಯವಹಾರ ಜ್ಞಾನದ ಜತೆಗೆ ವಾಸ್ತವ ಸ್ಥಿತಿಗತಿ ಅರ್ಥ ಮಾಡಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಹೇಳಿದರು.
ತಾಲೂಕಿನ ಚಿಪ್ಪಳ್ಳಿಯಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆಯಲ್ಲಿ ಮಾತನಾಡಿದ ಅವರು, ಕಾಲಕಾಲಕ್ಕೆ ಬೇಕಾದ ಶಿಕ್ಷಣವನ್ನು ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಾಗಿ ಮಕ್ಕಳಿಗೆ ಬೋಧಿಸುತ್ತಾ ಹೋದರೆ ಸ್ಪರ್ಧಾತ್ಮಕ ಜಗತ್ತು ಎದುರಿಸಲು ಪೂರಕವಾಗುತ್ತದೆ. ಗ್ರಾಮೀಣ ಭಾಗದಲ್ಲಿ ತಮ್ಮ ಹಿತ್ತಲಿನಲ್ಲಿಯೇ ಬೆಳೆದ ತರಕಾರಿ, ಹಣ್ಣು ಇನ್ನಿತರೆ ವಸ್ತುಗಳನ್ನು ಮಕ್ಕಳು ಮಾರಾಟಕ್ಕೆ ತಂದಿರುವುದು ಸಂತಸದ ಸಂಗತಿ ಎಂದರು.
ಕಲ್ಮನೆ ಗ್ರಾಪಂ ಅಧ್ಯಕ್ಷ ಸುರೇಶ್, ಪ್ರಮುಖರಾದ ಅಕ್ಷರ, ಸುರೇಶ ಗೌಡ, ವಿ.ಟಿ.ಸ್ವಾಮಿ, ನೇತ್ರಾವತಿ, ಸವಿತಾ, ಸಂಧ್ಯಾರಾಣಿ, ಕಬೀರ್, ನಾಗರಾಜ್ ಇತರರಿದ್ದರು.