ಕೋಲಾರ: ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಯು ರುಚಿ, ಶುಚಿಯಾದ ಬಿಸಿಯೂಟ ಮಾಡಿ ಬಡಿಸುವ ಜೊತೆಗೆ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನೀಗಿಸುವ ತಾಯಂದಿರಂತೆ ಕಾರ್ಯನಿರ್ವಹಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ. ಮುನಿಯಪ್ಪ ಹೇಳಿದರು.
ತಾಲೂಕಿನ ಕೆಂಬೋಡಿಯ ಜನತಾ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಐದು ಕ್ಲಸ್ಟರ್ಗಳ ಬಿಸಿಯೂಟ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಆಹಾರ ಧಾನ್ಯ, ತರಕಾರಿ ಬಳಸಬೇಕು. ಅಡುಗೆಗೆ ಮತ್ತು ಮಕ್ಕಳ ಕುಡಿಯುವುದಕ್ಕೆ ಶುದ್ಧನಿರು ಬಳಸಿ, ರುಚಿಕರ ಮತ್ತು ಪೌಷ್ಟಿಕಾಂಶ ಭರಿತ ಆಹಾರವನ್ನು ಮಕ್ಕಳಿಗೆ ನೀಡಬೇಕು. ಶಾಲೆಗಳಲ್ಲಿ ಸುರಕ್ಷತೆಗೆ ಒತ್ತು ನೀಡಿ, ಅಡುಗೆ ಕೋಣೆಯನ್ನು ಸದಾ ಶುಚಿಯಾಗಿಟ್ಟುಕೊಂಡಿರಿ, ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಮಕ್ಕಳನ್ನು ಸೇರಿಸಬೇಡಿ ಎಂದರು.
ಹಾಜರಾತಿಗನುಗುಣವಾಗಿ ಧಾನ್ಯ ಬಳಸಿ: ಮಧ್ಯಾಹ್ನ ಉಪಹಾರ ಯೋಜನೆ ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಹ್ಮಣ್ಯಂ ಮಾತನಾಡಿ, ಶಾಲೆಗಳಿಗೆ ಅಗತ್ಯ ಆಹಾರ ಧಾನ್ಯ, ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ಒದಗಿಸಲಾಗುತ್ತಿದೆ. ದಾಸ್ತಾನು ಸದಾ ಪರಿಶೀಲಿಸಿಕೊಳ್ಳಿ. ಮಕ್ಕಳ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಅಡುಗೆಗೆ ಬಳಸಿ ಎಂದರು.
ಆಹಾರ ಧಾನ್ಯಗಳ ಗುಣಮಟ್ಟದಲ್ಲಿ ಲೋಪವಿದ್ದರೆ ತಿರಸ್ಕರಿಸಿ, ಈ ಸಂಬಂಧ ನಮಗೆ ದೂರು ನೀಡಿ. ದಾಸ್ತಾನು, ಅಡುಗೆ ಕೊಠಡಿಯಲ್ಲಿ ಇಲಿಗಳು ಸೇರದಂತೆ ಎಚ್ಚರ ವಹಿಸಿ, ಅಡುಗೆ ಮನೆಯಲ್ಲಿ ಹಲ್ಲಿಗಳು ಬಾರದಂತೆ ಗಮನಹರಿಸುತ್ತಿರಿ ಎಂದರು.
ಬಿಸಿಯೂಟ ಸಿಬ್ಬಂದಿಗೆ ಆಹಾರ ಧಾನ್ಯ ಬಳಸಿ ಬಿಸಿ, ರುಚಿಯಾದ ಆಹಾರ ತಯಾರಿಕೆ ವಿಧಾನ, ಶುಚಿತ್ವ ಮತ್ತು ಅಡುಗೆ ಮನೆ ನಿರ್ವಹಣೆಯ ಜವಾಬ್ದಾರಿಗಳ ಕುರಿತು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಿದರು.
ಅಗ್ನಿಶಾಮಕದಳದ ಅಧಿಕಾರಿ ನಾಗರಾಜ್, ಅಗ್ನಿ ಅವಢಗಳ ನಿರ್ವಹಣೆ, ಅಗ್ನಿ ಅನಾಹುತ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು, ಅಡುಗೆ ಅನಿಲ ಸೋರಿಕೆ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಅರಿವು ಮೂಡಿಸಿದರು.
ಬಿಸಿಯೂಟ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಅಡುಗೆ ತಯಾರಿಕಾ ಸ್ಪರ್ಧೆ ಏರ್ಪಡಿಸಿದ್ದು, ಜನತಾ ಪ್ರೌಢಶಾಲೆ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ ಬಿಸಪ್ಪಗೌಡ ರುಚಿ ನೋಡಿ ಸ್ಪರ್ಧಿಗಳನ್ನು ಆಯ್ಕೆ ಮಾಡಿದರು.
ಜನತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ರವಿ, ಬಿಆರ್ಪಿ ರಶ್ಮಿ, ಸಂಪನ್ಮೂಲ ವ್ಯಕ್ತಿಗಳಾಗಿ ತಾಲೂಕಿನ ಪಟ್ನ ಶಾಲೆಯ ಶಿಕ್ಷಕ ವೆಂಕಟೇಶ್, ಎಂ. ನಾಗರಾಜು, ಮಂಜುನಾಥ್, ನಂಜುಂಡಗೌಡ, ಹುತ್ತೂರು ಸಿಆರ್ಪಿ, ಅಗ್ನಿಶಾಮಕ ಠಾಣಾಧಿಕಾರಿಗಳು ಅಗ್ನಿನಂದಕದ ಕುರಿತು ಪ್ರಾತ್ಯಕೆ ನೀಡಿದರು.