ಕೋಲಾರ ವಿಧಾನ ಸಭೆ ಕ್ಷೇತ್ರದ ಅಭ್ಯರ್ಥಿಗಳಿಂದ ಮತದಾರರನ್ನು ಸೆಳೆಯಲು ಕಸರತ್ತು
ಕೋಲಾರ: ತೀವ್ರ ಕುತೂಹಲ ಕೆರಳಿಸಿರುವ ಕೋಲಾರ ವಿಧಾನಸಭಾ ಕ್ಷೇತ್ರ ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗಳಿಂದ ಬಿರುಸಿನ ಪ್ರಚಾರ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ಕಸರತ್ತು ನಡೆಸುತ್ತಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನಾಲ್ಕೈದು ದಿನಗಳಿಂದ ಕ್ಷೇತ್ರಗಳನ್ನು ನಡೆಸುವ ಮೂಲಕ ಮತದಾರರನ್ನು ತಲುಪುವ ಕೆಲಸ ಮಾಡುತ್ತಿವೆ.
ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಘೋಷಣೆ ತಡವಾದ ಕಾರಣ ಕೊನೇ ಗಳಿಗೆಯಲ್ಲಿ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರು ಅಭ್ಯರ್ಥಿಯಾಗಿದ್ದು, ನಾಲ್ಕೆದು ದಿನಗಳಿಂದ ಅಭ್ಯರ್ಥಿ ಜತೆಯಲ್ಲಿ ಕಾಂಗ್ರೆಸ್ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಎಂಎಲ್ಸಿಗಳಾದ ನಜೀರ್ ಅಹ್ಮದ್, ಅನಿಲ್ಕುಮಾರ್, ಶಾಸಕ ಶ್ರೀನಿವಾಸಗೌಡ ಪ್ರಚಾರದ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈಗಾಗಲೇ ನರಸಾಪುರ, ವಕ್ಕಲೇರಿ ಹೋಬಳಿಗಳನ್ನು ಮುಗಿಸಿ ಕಸಬಾ ಹೋಬಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ಹಮ್ಮಿಕೊಂಡಿದ್ದಾರೆ.
ಪ್ರಚಾರ ತಡವಾದರೂ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ವಿವಿಧ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮತದಾರರನ್ನು ತಲುಪುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರಕ್ಕೆ ಬರುತ್ತಾರೆಂದು ನಂಬಿಕೊಂಡಿದ್ದ ಕಾಂಗ್ರೆಸ್ ಕೊನೇ ಗಳಿಗೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಮುಂದಾಗಿದೆ. ಜತೆಗೆ ಚದುರಿಹೋಗಿದ್ದ ಕಾಂಗ್ರೆಸ್ ಮುಖಂಡರು ಸಾಥ್ ನೀಡತೊಡಗಿದ್ದಾರೆ.
ಕಾಂಗ್ರೆಸ್ ಪ್ರಚಾರಕ್ಕೆ ಬ್ರೇಕ್ ಹಾಕುವ ಕೆಲಸಕ್ಕೆ ಜೆಡಿಎಸ್ ಮತ್ತು ಬಿಜೆಪಿ ಮುಂದಾಗುತ್ತಿದೆ. ಕಾಂಗ್ರೆಸ್ ಮುನ್ನುಗ್ಗುತ್ತಿರುವ ಕಡೆಗಳಲ್ಲಿ ಹಿಂದೆಯೇ ತೆರಳಿ ಜೆಡಿಎಸ್ ಹಾಗೂ ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಮಾಡ ತೊಡಗಿವೆ. ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ವರ್ತೂರು ಆರ್. ಪ್ರಕಾಶ್ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಒಂದು ಬಾರಿ ಪರಾಭವಗೊಂಡು ಈ ಬಾರಿ ಬಿಜೆಪಿಯಿಂದ ಸ್ವರ್ಧೆಗೆ ಮುಂದಾಗಿದ್ದಾರೆ. ಕಾಲಾವಕಾಶ ಇದ್ದ ಕಾರಣ ಕ್ಷೇತ್ರವನ್ನು ಎರಡು ಮೂರು ಬಾರಿ ಸುತ್ತಿ ಮತದಾರರನ್ನು ತಲುಪುವ ಕೆಲಸ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕಳೆದ ಎರಡು ವರ್ಷಗಳಿಂದ ಕೋಲಾರದಿಂದ ಸ್ಪರ್ಧಿಸುವ ಆಲೋಚನೆಯಲ್ಲಿ ಸಮಾಜ ಸೇವೆಯ ಮೂಲಕ ಕ್ಷೇತ್ರದಾದ್ಯಂತ ಸಂಚರಿಸಿದ್ದಾರೆ.