ಹಾಸನ: ಭೂ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಭರವಸೆ ನೀಡಿದರು.
ಅರಸೀಕೆರೆ ತಾಲೂಕಿನ ಬೆಂಡೇಕೆರೆ ಗ್ರಾಮದ ಶೆಟ್ಟಿಕಟ್ಟೆಯಮ್ಮ ದೇಗುಲದ ಆವರಣದಲ್ಲಿ ಬುಧವಾರ ಚತುಷ್ಪಥ ಹೆದ್ದಾರಿ ಕಾಮಗಾರಿಯಲ್ಲಿ ಭೂಮಿ ಕಳೆದುಕೊಂಡ ರೈತರೊಂದಿಗೆ ಮಾತನಾಡಿದರು. ಮಾರ್ಗಸೂಚಿ ಬೆಲೆ ಪರಿಷ್ಕರಣೆ ಸಂಬಂಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿ ನ್ಯಾಯಯುತ ದರ ನೀಡುವಂತೆ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.
ಈಗಾಗಲೇ ಆದೇಶದ ಪ್ರತಿಯೂ ದೊರೆತಿದ್ದು, ಶೀಘ್ರವೇ ಸಮಸ್ಯೆ ಪರಿಹಾರವಾಗಲಿದೆ. ಅಧಿಕಾರಿಗಳು ತಕ್ಷಣವೇ ಜಮೀನು ಸರ್ವೇ ನಡೆಸಲು ಕಾರ್ಯಪ್ರವೃತ್ತರಾಗಬೇಕು. ಮನೆ ಕಳೆದುಕೊಂಡವರಿಗೆ ಶೀಘ್ರ ಪರಿಹಾರದ ಹಣ ನೀಡಬೇಕೆನ್ನುವುದು ನನ್ನ ಒತ್ತಾಯವಾಗಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು ಎಂದು ಆತ್ಮಸ್ಥೈರ್ಯ ತುಂಬಿದರು.
ಮುಖಂಡರಾದ ರಾಂಪುರ ಶೇಖರಪ್ಪ, ಭೈರಗೊಂಡನಹಳ್ಳಿ ಉಮೇಶ್, ಅಶೋಕ್, ಕುಮಾರ್, ತಾಪಂ ಮಾಜಿ ಸದಸ್ಯ ಧರ್ಮಣ್ಣ ಇನ್ನಿತರರಿದ್ದರು.