ಸೋಮವಾರಪೇಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯ, ಧೈರ್ಯದಿಂದ ಒತ್ತಡ ಮುಕ್ತವಾಗಿ ಪರೀಕ್ಷೆ ಬರೆದರೆ ಕಲಿಕೆಗೆ ಅನುಗುಣವಾಗಿ ಅಂಕಗಳನ್ನು ಗಳಿಸಬಹುದು ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್ಜೆಎಂ ಪ್ರೌಢಶಾಲೆ ಆವರಣದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಪರೀಕ್ಷೆಗೆ ತಯಾರಿ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.
ನಿರಂತರ ಓದು ನಮ್ಮಲ್ಲಿ ಜ್ಞಾನ ತುಂಬಿಸುತ್ತದೆ. ಓದು ಕೇವಲು ಪರೀಕ್ಷೆ ಎದುರಿಸುವುದಕ್ಕೆ ಮಾತ್ರದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ನೆರವಾಗುತ್ತದೆ. ಶಿಕ್ಷಕರು ಹೇಳಿದ ವಿಷಯಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕು ಎಂದರು.
ಪರೀಕ್ಷೆಯ ಬಗ್ಗೆ ಭಯಬೇಡ. ಹತ್ತು ತಿಂಗಳಲ್ಲಿ ನೀವು ಕಲಿತಿದ್ದನ್ನು ನೀವು ಬರೆಯುತ್ತೀರಿ ಅಷ್ಟೇ. ಆದ್ದರಿಂದ ಮೊದಲು ಪ್ರಶ್ನೆ ಪತ್ರಿಕೆ ಗಮನವಿಟ್ಟು ಓದಿರಿ. ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿರಕ್ತಮಠದ ಮಠಾಧೀಶ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರ ವಿತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದದ್ದರು. ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ಮಾಜಿ ಸದಸ್ಯ ಎಸ್.ಮಹೇಶ್, ಮುಖ್ಯಶಿಕ್ಷಕ ಮಾರಪ್ಪ, ಶಿಕ್ಷಕಿ ರಾಣಿ ರವೀಂದ್ರ ಇದ್ದರು.