ಮಂಗಳೂರು: ಕರೊನೋತ್ತರದಲ್ಲಿ ದೇಶದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಆರ್ಥಿಕ ವರ್ಷದ ಆರಂಭದಿಂದಲೇ ಮಹತ್ತರ ಬದಲಾವಣೆಗಳು ಗೋಚರಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಕಾಶಿನಾಥ್ ಮರಾಠೆ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಆರ್ಥಿಕ ವರ್ಷದ ಅಂತ್ಯ ಮಾರ್ಚ್ನಲ್ಲಿ ಗ್ರಾಸ್ ಎನ್ಪಿಎ ಶೇ.10 ಮತ್ತು ನೆಟ್ ಎನ್ಪಿಎ ಶೇ.5.1 ದಾಖಲಿಸಿದ್ದು, ಇದು ಆರ್ಬಿಐನ ಗುಣಾಂಕವಾಗಿರುವ ಶೇ.6ಕ್ಕಿಂತ ಕಡಿಮೆ. ಜತೆಗೆ ಪ್ರೊವಿಷನಿಂಗ್ ಕವರೇಜ್ ಅನುಪಾತ ಶೇ.60ರಷ್ಟಿತ್ತು. ಕಠಿಣ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ಬ್ಯಾಂಕ್ಗಳು ಉತ್ತಮ ಕಾರ್ಯವೆಸಗಿವೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.23ರಷ್ಟಿತ್ತು. 5-6 ತಿಂಗಳು ಯಾವುದೂ ಸಹಜ ಸ್ಥಿತಿಯಲ್ಲಿರಲಿಲ್ಲ. ಪರಿಣಾಮ ಈ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.-7.7ರಿಂದ 8ರಷ್ಟಿದೆ. ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಹಕಾರಿ ಬ್ಯಾಂಕ್ಗಳ ಸಾಧನೆ: ಕಳೆದ ವಾರ ಆರ್ಬಿಐ ಬಿಡುಗಡೆ ಮಾಡಿದ ಬ್ಯಾಂಕ್ಗಳ ಟ್ರೆಂಡ್ಸ್ ಆ್ಯಂಡ್ ಪ್ರೋಗ್ರೆಸ್ ವರದಿ ರೇಟಿಂಗ್ ಗಮನಿಸಿದರೆ, ದೇಶದ 15,050 ಸಹಕಾರಿ ಬ್ಯಾಂಕ್ಗಳ ಪೈಕಿ ಶೇ.75 ಬ್ಯಾಂಕ್ಗಳು ಎ., ಬಿ+ ಮತ್ತು ಬಿ. ರೇಟಿಂಗ್ ಪಡೆದಿವೆ. ಸಹಕಾರಿ ಬ್ಯಾಂಕ್ಗಳು ತಂತ್ರಜ್ಞಾನ ಅಳವಡಿಕೊಳ್ಳುವಲ್ಲಿ ಖಾಸಗಿ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸಮನಾಗಿವೆ. ಶೇ.100ರಷ್ಟು ಕೋರ್ ಬ್ಯಾಂಕಿಂಗ್ ಅಡಿ ಕಾರ್ಯನಿರ್ವಹಿಸುತ್ತಿವೆ. ಎನ್ಇಎಫ್ಟಿ, ಆರ್ಟಿಜಿಎಸ್, ಯುಪಿಐ ಮೊದಲಾದವುಗಳನ್ನು ಅಳವಡಿಸಿ ಗ್ರಾಹಕರಿಗೆ ಸೇವೆ ನೀಡುತ್ತಿದೆ ಎಂದರು.
ಸಹಕಾರ ಭಾರತಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕಾರ್ಯದರ್ಶಿ ಹರೀಶ್ ಆಚಾರ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರವಿರಾಜ್ ಹೆಗ್ಡೆ, ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಮಂಗಳೂರು ಮಹಾನಗರ ಜಿಲ್ಲೆ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಣೈ ಮರೋಳಿ ಉಪಸ್ಥಿತರಿದ್ದರು.
ದೇಶಕ್ಕೆ ಸಹಕಾರಿ ಚಳವಳಿಗಳ ಅವಶ್ಯಕತೆಯಿದೆ. 20 ಸಾವಿರ ಸಹಕಾರಿ ಸಂಘಗಳಿವೆ. ಖಾಸಗಿ-ಸಾರ್ವಜನಿಕ ರಂಗಕ್ಕೆ ಪರ್ಯಾಯವಾಗಿ ಸಹಕಾರಿ ರಂಗ ಕೆಲಸ ಮಾಡುತ್ತಿದೆ. ಸ್ವಾಯತ್ತ ಸಂಸ್ಥೆಗಳಾದ ಇವುಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. 28 ಕೋಟಿ ಜನರು ದೇಶದ 8 ಲಕ್ಷ ಸಹಕಾರಿ ಸಂಘಗಳೊಂದಿಗೆ ಕೈಜೋಡಿಸುತ್ತಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಸಹಕಾರಿ ವ್ಯವಸ್ಥೆ.
– ಸತೀಶ್ ಕಾಶಿನಾಥ್ ಮರಾಠೆ ನಿರ್ದೇಶಕರು, ಆರ್ಬಿಐ