ನವದೆಹಲಿ: ರಾಷ್ಟ್ರೀಯ ಚುನಾವಣಾ ಆಯೋಗವು ಸೋಮವಾರ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದ್ದು ಟಿಎಂಸಿ, ಎನ್ಸಿಪಿ, ಸಿಪಿಐಗೆ ನೀಡಿದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹಿಂಪಡೆದಿದೆ.
ಸೋಮವಾರ ಈ ಕುರಿತು ಆದೇಶ ಹೊರಡಿಸಿರುವ ಚುನಾವಣಾ ಆಯೋಗವು ರಾಷ್ಟ್ರೀಯ ಲೋಕದಳ, ಭಾರತ ರಾಷ್ಟ್ರ ಸಮಿತಿ, ಮಣಿಪುರದ ಪಿಡಿಎ, ಪುದುಚ್ಚೆರಿಯ ಪಿಎಂಕೆ, ಪಶ್ಚಿಮ ಬಂಗಾಳದ ಆರ್ಎಸ್ಪಿ, ಮಿಜೋರಾಂನ ಎಂಪಿಸಿ ಪಕ್ಷಗಳಿಗೆ ನೀಡಿದ್ದ ಪ್ರಾದೇಶಿಕ ಪಕ್ಷಗಳ ಸ್ಥಾನಮಾನವನ್ನು ಹಿಂಪಡೆದಿದೆ.
ಎಎಪಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ದೆಹಲಿ, ಗೋವಾ, ಪಂಜಾಬ್ ಹಾಗೂ ಗುಜರಾತ್ನಲ್ಲಿ ಮಾಡಿದ ಚುನಾವಣಾ ಸಾಧನೆಯ ಮೇರೆಗೆ ಅವರ ಪಕ್ಷಕ್ಕೆ ಆಯೋಗವು ರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ.
ಇದನ್ನೂ ಓದಿ: ವಿವಿ ಪುರ-ಜಯನಗರ ಪೊಲೀಸರ ಜಂಟಿ ಕಾರ್ಯಾಚರಣೆ; 8.52 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ವಿಪಕ್ಷಗಳಿಗೆ ಶಾಕ್ ನೀಡಿದ ಆಯೋಗ
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಹರಿಹಾಯುತ್ತ ಬಂದಿದ್ದ ವಿಪಕ್ಷಗಳಾದ ಟಿಎಂಸಿ, ಎನ್ಸಿಪಿ, ಸಿಪಿಐ ಪಕ್ಷಗಳಿಗೆ ನೀಡಲಾಗಿದ್ದ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನವನ್ನು ಹಿಂಪಡೆದಿರುವ ಚುಣಾವಣಾ ಆಯೋಗವು ಪ್ರಾದೇಶಿಕ ಪಕ್ಷದ ಸ್ಥಾನಮಾನ ನೀಡಿದೆ.
ಉತ್ತರಪ್ರದೇಶದ ರಾಷ್ಟ್ರೀಯ ಲೋಕದಳ, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್ ನೇತೃತ್ವದ ಬಿಆರ್ಎಸ್ ಪಕ್ಷಕ್ಕೆ ಆಂಧ್ರಪ್ರದೇಶದಲ್ಲಿ ನೀಡಲಾಗಿದ್ದ ಪ್ರಾದೇಶಿಕ ಪಕ್ಷದ ಸ್ಥಾನಮಾನವನ್ನು ಆಯೋಗ ಹಿಂಪಡೆದಿದೆ.
ಚುನಾವಣಾ ಆಯೋಗ ಸ್ಪಷ್ಟನೆ
ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗವು ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಪಡೆದ ಮತಗಳ ಆಧಾರದ ಮೇಲೆ ಎನ್ಸಿಪಿ-ಟಿಎಂಸಿ ಪಕ್ಷಗಳನ್ನು ಅಲ್ಲಿನ ಪ್ರಾದೇಶಿಕ ಪಕ್ಷಗಳ ಸ್ಥಾನಮಾನ ನೀಡಲಾಗಿದೆ.
ಬಿಜೆಪಿ, ಕಾಂಗ್ರೆಸ್, ಎಎಪಿ, ಬಿಎಸ್ಪಿ, ಎನ್ಪಿಪಿ, ಸಿಪಿಐ(ಎಂ) ಪಕ್ಷಗಳು ರಾಷ್ಟ್ರೀಯ ಪಕ್ಷಗಳಾಗಿ ಉಳಿಯಲಿವೆ ಎಂದು ರಾಷ್ಟ್ರೀಯ ಚುನಾವಣಾ ಆಯೋಗ ತಿಳಿಸಿದೆ.