ನವದೆಹಲಿ: ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಮಹತ್ವದ ಸೂಚನೆ ನೀಡಿದೆ. ಯಾವುದೇ ಸಂದರ್ಭದಲ್ಲೂ ಮಕ್ಕಳನ್ನು ಪ್ರಚಾರ ಕಾರ್ಯಗಳಲ್ಲಿ ತೊಡಗಿಸಬಾರದು ಎಂದು ಹೇಳಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
‘ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ರ್ಯಾಲಿ, ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಸೇರಿಸಬಾರದು, ಪೋಸ್ಟರ್, ಕರಪತ್ರ ಹಂಚುವುದು, ಘೋಷಣೆ, ಪ್ರಚಾರ ಗೀತೆಗಳಿಗೆ ಬಳಸಬಾರದು, ಪ್ರಚಾರದ ವೇಳೆ ಮುಖಂಡರು ಮಕ್ಕಳನ್ನು ಕರೆದುಕೊಂಡು ವಾಹನದಲ್ಲಿ ಕೊಂಡೊಯ್ಯುವುದನ್ನು ಕೂಡ ನಿಷೇಧಿಸಲಾಗಿದೆ.” ಚುನಾವಣಾ ಆಯೋಗ ಹೇಳಿದೆ. ಅಭ್ಯರ್ಥಿಗಳು ಮತ್ತು ಪಕ್ಷಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.
ಚುನಾವಣಾ ಸಂಬಂಧಿತ ಕೆಲಸ ಮತ್ತು ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸದಂತೆ ಚುನಾವಣಾ ಅಧಿಕಾರಿಗಳು ಮತ್ತು ಆಡಳಿತಕ್ಕೆ ಇಸಿ ನಿರ್ದೇಶನಗಳನ್ನು ನೀಡಿದೆ. ಬಾಲಕಾರ್ಮಿಕ ಕಾನೂನು ಮತ್ತು ನಿಯಮಾವಳಿಗಳು ಸರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳ ಮೇಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಡಳಿತ ಎಚ್ಚರಿಕೆ ನೀಡಿದೆ.
ಮುಂದಿನ ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ: ಲೋಕಸಭೆ ಚುನಾವಣೆಯ ಪ್ರಕ್ರಿಯೆಗಳ ಸಿದ್ಧತೆ ಶೀಘ್ರ ಆರಂಭವಾಗಲಿದೆ. ಚುನಾವಣೆಗೆ ತಯಾರಿ ನಡೆಸಲು ಹಾಗೂ ಎಲ್ಲ ಅಧಿಕಾರಿಗಳು ಚುನಾವಣಾ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಕಾರಣಕ್ಕೆ ದೆಹಲಿಯ 11 ಜಿಲ್ಲಾಗಳಲ್ಲಿರುವ ಚುನಾವಣಾ ಅಧಿಕಾರಿಗಳಿಗೆ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶವನ್ನು ಹೊರಡಿಸಲಾಗಿದೆ ತಿಳಿಸಿದೆ.
2019ರಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಕ್ರಿಯೆಯಂತೆ 2024ರ ಚುನಾವಣೆಯು ನಡೆಯಲಿದೆ ಎಂದು ಚರ್ಚೆಗಳು ಕೇಳಿಬಂದಿವೆ. ಏಳು ಹಂತದಲ್ಲಿ ಚುನಾವಣಾ ನಡೆಯಲಿದ್ದು, ಏಪ್ರಿಲ್ 11ರಂದು ಪ್ರಾರಂಭವಾಗಿ ಮೇ 19ಕ್ಕೆ ಕೊನೆಗೊಳ್ಳಲಿದೆ ಎನ್ನಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ನಿರಾತಂಕ ಹಾಗೂ ಅಚ್ಚುಕಟ್ಟಾಗಿ ನಡೆಯಸಲು ಆಯಾ ಮತದಾರ ಕ್ಷೇತ್ರವಾರು, ಜಿಲ್ಲಾವಾರು ಸರ್ಕಾರಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಯುವ ಮತದಾರರ ಹಾಗೂ ಜನಸಂಖ್ಯೆಯ, ಲಿಂಗಾನುಪಾತದ ಮಾಹಿತಿ ಪಡೆಯುವಂತೆ ಅವರು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.