ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನೂರಾರು ಸಂಖ್ಯೆಯಲ್ಲಿದ್ದಾಗಲೇ ಲಾಕ್ಡೌನ್ ಮಾಡಿದ್ದರಿಂದ ಕರೊನಾ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಗ್ರ್ಯಾಂಡ್ ಚಾಲೆಂಜಸ್ ಆ್ಯನುವಲ್ ಮೀಟಿಂಗ್ 2020ರಲ್ಲಿ ಇದೀಗವಷ್ಟೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ ಅವರು, ಭಾರತದಲ್ಲಿ ಒಳ್ಳೆಯ ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳೂ ಇವೆ. ಅವುಗಳು ನಮ್ಮ ದೊಡ್ಡ ಆಸ್ತಿ. ಕರೊನಾ ಪಿಡುಗನ್ನು ಎದುರಿಸಲು ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಯುಎಸ್ಗಿಂತ ನಾಲ್ಕುಪಟ್ಟು ಜನರು ಭಾರತದಲ್ಲಿದ್ದಾರೆ. ಬೇರೆ ದೊಡ್ಡ ವಿದೇಶಗಳಲ್ಲಿರುವಷ್ಟು ಜನರು ಭಾರತದ ಕೆಲವು ರಾಜ್ಯಗಳಲ್ಲೇ ಇದ್ದಾರೆ. ಅದಾಗ್ಯೂ ಭಾರತ ಕರೊನಾ ಪಿಡುಗನ್ನು ಸಮರ್ಥವಾಗಿ ಎದುರಿಸಿದ್ದು, ನಮ್ಮಲ್ಲಿ ಕೋವಿಡ್ ಸಾವಿನ ಪ್ರಮಾಣ ತೀರಾ ಕಡಿಮೆ ಇದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಒಂದು ದಿನದಲ್ಲಿ ಕರೊನಾದಿಂದ ಸಂಭವಿಸುವ ಸಾವು ಹಾಗೂ ಹೊಸ ಕೇಸ್ಗಳ ಪ್ರಮಾಣವೂ ತಗ್ಗಿದೆ. ಅತ್ಯಧಿಕ ಅಂದರೆ ಶೇ. 88 ಚೇತರಿಕೆ ಪ್ರಮಾಣವನ್ನು ಭಾರತ ಹೊಂದಿದೆ. ಆರಂಭದಲ್ಲಿ ಪ್ರಕರಣಗಳ ಸಂಖ್ಯೆ ನೂರಾರು ಇದ್ದಾಗಲೇ ಲಾಕ್ಡೌನ್ ಘೋಷಿಸಿದ್ದು, ಮಾಸ್ಕ್ ಬಳಕೆ ಹಾಗೂ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯನ್ನೂ ಬೇಗ ಅಳವಡಿಸಿಕೊಂಡಿದ್ದರಿಂದ ಇವೆಲ್ಲ ಸಾಧ್ಯವಾಯಿತು. ಮುಂದೆ ಲಸಿಕೆ ಕಂಡುಹಿಡಿಯುವಲ್ಲೂ ಭಾರತ ಇಷ್ಟೇ ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸಲಿದೆ ಎಂದರು.
ಕರೊನಾ ಪಿಡುಗು ನಮಗೆ ಟೀಮ್ ವರ್ಕ್ನ ಮಹತ್ವವನ್ನು ತಿಳಿಸಿದೆ. ಯಾವುದೇ ಭೇದ-ಭಾವ ಇಲ್ಲದೆ ತಂಡವಾಗಿ ಕೆಲಸ ಮಾಡುವುದನ್ನು ಅದು ಹೇಳಿಕೊಟ್ಟಿದೆ. ಈ ಗ್ರ್ಯಾಂಡ್ ಚಾಲೆಂಜಸ್ ಆ್ಯನುವಲ್ ಮೀಟಿಂಗ್ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ವರ್ಚುವಲ್ ಆಗಿ ನಡೆಯುತ್ತಿದೆ. ತಂತ್ರಜ್ಞಾನ ಎಷ್ಟು ಶಕ್ತಿಶಾಲಿ ಆಗಿದೆ ಎಂದರೆ ಇಂಥ ಸಂದರ್ಭದಲ್ಲೂ ನಾವು ಬೇರೆ ಆಗಿರದಂತೆ ನೋಡಿಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.