| ಶಿವಾನಂದ ಹಿರೇಮಠ ಗದಗ
ಕಳೆದೆರಡು ವರ್ಷದಿಂದ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಜಾಗೃತಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಆಗದಿರುವುದರಿಂದ ರಾಜ್ಯದಲ್ಲಿ ಯೋಜನೆಗೆ ಹಿನ್ನಡೆ ಆಗಿದೆ. ಅಲ್ಲದೆ, ಈ ಮೊದಲು ಬಿಡುಗಡೆ ಮಾಡಿದ ಅನುದಾನವನ್ನೂ ರಾಜ್ಯ ಸರ್ಕಾರ ಹಿಂಪಡೆದಿದೆ ಎಂದು ತಿಳಿದುಬಂದಿದೆ.
ಹೆಣ್ಣು ಭ್ರೂಣ ಹತ್ಯೆ ತಡೆ, ಹೆಣ್ಣುಮಕ್ಕಳ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದ ಈ ಯೋಜನೆಗೆ ದೇಶದ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲೆಗಳು ಇದರಲ್ಲಿ ಸೇರಿವೆ. 2022-23ನೇ ಸಾಲಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯೋಜನೆ ವಿಸ್ತರಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಕೊನೇ ತ್ರೖೆಮಾಸಿಕದಲ್ಲಿ ಯೋಜನೆ ಜಾರಿಗೆ ಸರ್ಕಾರದಿಂದ ನಿರ್ದೇಶನ ಬಂದಿದೆ. ಹೆಣ್ಣುಮಕ್ಕಳ ಸಬಲೀಕರಣ, ಶಿಕ್ಷಣದಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ಬಂದಿದೆಯಾದರೂ ಆರ್ಥಿಕ ಬೆಂಬಲ ಸಿಕ್ಕಿಲ್ಲ.
ಅನುದಾನ ಕೊರತೆ: ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಕೈಬಿಟ್ಟ ಯೋಜನೆಗಳಲ್ಲಿ ಬೇಟಿ ಬಚಾವೋ, ಬೇಟಿ ಪಢಾವೋ ಸಹ ಸೇರಿದೆ. 2020-21ರಲ್ಲಿ ಪ್ರತಿ ಜಿಲ್ಲೆಗೆ 11 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. 2021-22ರಲ್ಲಿ ಪ್ರತಿ ಜಿಲ್ಲೆಗೆ 30 ಲಕ್ಷ ರೂ. ಅನುದಾನ ಹಂಚಿಕೆ ಮಾಡಿದ್ದರೂ ಕೋವಿಡ್ ಕಾರಣದಿಂದ ಅದನ್ನು ಆರೋಗ್ಯ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ. 2022-23ನೇ ಸಾಲಿನಲ್ಲಿ ಅನುದಾನ ಹಂಚಿಕೆಯೇ ಆಗಿಲ್ಲ.
2023ನೇ ವರ್ಷದ ಆರಂಭದಲ್ಲಿ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಕಾರಣದಿಂದ ಸ್ವಲ್ಪ ಹಿನ್ನಡೆ ಆಗಿರಬಹುದು. ಆದರೆ, ಯೋಜನೆ ಅನುಷ್ಠಾನದಿಂದ ಹಿಂದೆ ಸರಿದಿಲ್ಲ.
| ಅನುರಾಧಾ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು
ಹಿಂದಿನ ಉಳಿಕೆ ಅನುದಾನ ವಾಪಸ್ ಹೋಗಿದೆ. ಪ್ರಸಕ್ತ ಸಾಲಿನಲ್ಲಿ ಅನುದಾನ ನೀಡಿಲ್ಲ. ಹೀಗಾಗಿ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನ ಯೋಜನೆಗಳ ಜಾರಿ ಬಾಕಿ ಇದ್ದು, ಸರ್ಕಾರದ ನಿರ್ದೇಶನ ಪಾಲಿಸಲಾಗುತ್ತಿದೆ.
| ಪರಶುರಾಮ ಶೆಟ್ಟಪ್ಪನವರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಧಿಕಾರಿ ಗದಗ
ಕೊಟ್ಟಿದ್ದು ವಾಪಸ್!: ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಯೋಜನೆ ವಿಸ್ತರಿಸುವಾಗ ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದ್ದ ಅನುದಾನದ ಉಳಿಕೆ ಹಣವನ್ನು ಅಂದರೆ, ಗದಗ ಜಿಲ್ಲೆಯ 26 ಲಕ್ಷ ರೂ. ಹಾಗೂ ಇನ್ನುಳಿದ 4 ಜಿಲ್ಲೆಗಳಲ್ಲಿನ ಉಳಿಕೆ ಹಣವನ್ನು ಸರ್ಕಾರ ಹಿಂಪಡೆದಿದೆ. ಅನುದಾನ ಕೊರತೆಯಿಂದ ಕಳೆದ 10 ತಿಂಗಳಿಂದ ರಾಜ್ಯದೆಲ್ಲೆಡೆ ಯೋಜನೆಯ ಪ್ರಗತಿ ಶೂನ್ಯವಾಗಿದೆ. ಇನ್ನು ಉಳಿದಿರುವುದು 2 ತಿಂಗಳಷ್ಟು ಸಮಯ ಮಾತ್ರ. ಅನುದಾನವನ್ನೂ ನೀಡದೇ ಜಾಗೃತಿ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ.
ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ; ಟೀ ಕೇಳಿದ್ದಕ್ಕೆ ಪತಿಗೆ ಚಾಕು ಚುಚ್ಚಿದ ಪತ್ನಿ!