ನೀರಿಲ್ಲದೆ ಕೈಕಟ್ಟಿ ಕುಳಿತ ರೈತ | ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ಕುಸಿತ
ಕಳೆದೆರಡು ವರ್ಷದಿಂದ ಉತ್ತಮ ಮಳೆ ಬಾರದೆ ಕೈಸುಟ್ಟುಕೊಂಡಿರುವ ಅನ್ನದಾತರಿಗೆ ಈ ಬಾರಿಯೂ ‘ಬರ’ಸಿಡಿಲ ಆಘಾತ ತಟ್ಟಿದೆ. ಕೆರೆ-ಕಟ್ಟೆಗಳು ಬತ್ತಿದ್ದು, ಕೊಳವೆಬಾವಿಗಳೂ ನೆಲಕಚ್ಚಿವೆ. ಕೆಲವು ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಳು ಬಿಸಿಲಿಗೆ ಒಣಗುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಮುಂಗಾರು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆದರೂ ಬಿತ್ತನೆಬೀಜ, ರಸಗೊಬ್ಬರಕ್ಕೆ ಬೇಡಿಕೆ ಕುಸಿದಿದೆ. ಕೆಲ ಜಿಲ್ಲೆಗಳಲ್ಲಿ ಸಾಕಷ್ಟು ದಾಸ್ತಾನು ಇದ್ದರೆ, ಇನ್ನೂ ಕೆಲವೆಡೆ ಮಳೆ ನೋಡಿಕೊಂಡು ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ‘ವಿಜಯವಾಣಿ’ ರಿಯಾಲಿಟಿ ಚೆಕ್ನಲ್ಲಿ ಕಂಡ ರಾಜ್ಯದ ವಾಸ್ತವ ಚಿತ್ರಣ ನಿಮ್ಮ ಮುಂದಿಡುತ್ತಿದ್ದೇವೆ.
ಭೀಕರ ಬರಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಕೃಷಿ ಚಟುವಟಿಕೆ ಬಹುತೇಕ ಸ್ತಬ್ಧವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕಬ್ಬು, ಭತ್ತ, ತೆಂಗು, ಅಡಕೆ, ಕಾಫಿ, ವೀಳ್ಯದೆಲೆ ಒಣಗುತ್ತಿದ್ದು ಪರಿಣಾಮ ರೈತರ ಬದುಕಿನ ಜತೆಯಲ್ಲೇ ಆರ್ಥಿಕತೆಗೂ ದೊಡ್ಡ ಹೊಡೆತ ಬಿದ್ದಿದೆ. ಕಳೆದ ವರ್ಷ ಪೂರ್ವ ಮುಂಗಾರು, ಮುಂಗಾರು ಸಂಪೂರ್ಣ ಕೈಕೊಟ್ಟಿತ್ತು. ಈ ವರ್ಷವೂ ಇದೇ ಸ್ಥಿತಿ ಎದುರಾ ಗುವುದೇ ಎಂಬ ಆತಂಕ ಮೂಡಿದೆ. ಏ. 27ರಿಂದ ಮೇ 10ರವರೆಗೆ ಭರಣಿ ಮಳೆಯಾಗಬೇಕಿದೆ. ಆದರೆ ವಾರ ಕಳೆಯು ತ್ತಿದ್ದರೂ ಕೆಲ ಜಿಲ್ಲೆಗಳಲ್ಲಿ ವರುಣನ ಸಿಂಚನವಾಗಿದ್ದು ಬಿಟ್ಟರೆ ರೈತರ ನಿರೀಕ್ಷೆಯಂತೆ ಮಳೆ ಬಿದ್ದಿಲ್ಲದಿರುವುದು ನೆಮ್ಮದಿ ಕದಡಿದೆ.
ಬರದ ಕಾರಣಕ್ಕೆ ರೈತರು ಬಹುತೇಕ ಜಿಲ್ಲೆಗಳಲ್ಲಿ ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಇಷ್ಟೊತ್ತಿಗಾಗಲೇ ಬಿತ್ತನೆಯಾಗುತ್ತಿತ್ತು. ಆದರೆ ಈ ಬಾರಿ ಬಿತ್ತನೆ ಬೀಜ ಇಲಾಖೆಯ ಉಗ್ರಾಣದಲ್ಲೇ ಕುಳಿತಿದೆ. ಸಾವಿರಾರು ಮೆಟ್ರಿಕ್ ಟನ್ನಷ್ಟು ರಸಗೊಬ್ಬರದ ಸಂಗ್ರಹವಿದ್ದರೂ ಕೇಳುವವರಿಲ್ಲದಂತಾಗಿದೆ. ದನಕರುಗಳಿಗೆ ಕುಡಿಯುವ ನೀರೊದಗಿಸುವುದೂ ರೈತರಿಗೆ ಸವಾಲಿನ ಕೆಲಸವಾಗಿದೆ. ಬೆಳಗಾವಿ, ಕಲಬುರಗಿ, ವಿಜಯನಗರ, ಕೊಪ್ಪಳ, ತುಮಕೂರು, ಹಾಸನ, ರಾಮನಗರ, ಹಾವೇರಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಯ ಕೆರೆ ಹಾಗೂ ಕೊಳವೆ ಬಾವಿಗಳು ಬಹುತೇಕ ಒಣಗಿವೆ.
ಬೇಡಿಕೆ ಇಲ್ಲದ ಜಿಲ್ಲೆಗಳು
ಕೊಡಗು, ಮೈಸೂರು, ಉತ್ತರ ಕನ್ನಡ, ಗದಗ, ಬೆಳಗಾವಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯದಿರುವ ಕಾರಣ ಸದ್ಯಕ್ಕೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಬೇಡಿಕೆ ಇಲ್ಲ. ಮಳೆ ನೋಡಿಕೊಂಡು ಮೇ ಕೊನೇ ವಾರದಲ್ಲಿ ಅಗತ್ಯತೆ ನೋಡಿಕೊಂಡು ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಜೂನ್ 2ನೇ ವಾರದಲ್ಲಿ ಬಿತ್ತನೆ ಆರಂಭವಾಗಲಿದ್ದು, ಬಿತ್ತನೆ ಬೀಜ, ಗೊಬ್ಬರ ಸಂಗ್ರಹಿಸಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಮಳೆಯಾದ ನಂತರದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ.
ಎಲ್ಲಿ ಬಿತ್ತನೆ ಬೀಜ ಲಭ್ಯ
ಶಿವಮೊಗ್ಗ, ಚಾಮರಾಜನಗರ, ವಿಜಯ ನಗರ, ರಾಯಚೂರು, ಉಡುಪಿ, ಹಾಸನ, ತುಮಕೂರು, ದ.ಕನ್ನಡ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ, ಬೀದರ್ನಲ್ಲಿ 1.10 ಲಕ್ಷ ಕ್ವಿಂಟಾಲ್ ಸೋಯಾಬೀನ್ ಬೀಜಕ್ಕೆ ಬೇಡಿಕೆ ಇದೆ. ಮಂಡ್ಯದಲ್ಲಿ 485 ಕ್ವಿಂಟಾಲ್ನಷ್ಟು ಅಲಸಂದೆ, 28 ಸಾವಿರ ಮೆಟ್ರಿಕ್ ರಸಗೊಬ್ಬರ ಕೃಷಿ ಇಲಾಖೆ ಸುರ್ಪದಿಯಲ್ಲಿದೆ. ಮಂಡ್ಯದಲ್ಲಿ ಅಲಸಂದೆ, ಎಳ್ಳು ಬಿತ್ತನೆಯಾಗಬೇಕಿತ್ತು. ಆದರೆ ಮಳೆಯಾಗದ ಕಾರಣ ಬೇಡಿಕೆಯಿಲ್ಲ.
5 ರೂ. ಪಾರ್ಲೆ-ಜಿ ಬಿಸ್ಕತ್ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!