ಬೆಂಗಳೂರು: ಮಾಜಿ ಸಚಿವ, ಅಜಾತಶತ್ರು ಡಾ.ಭೀಮಣ್ಣ ಖಂಡ್ರೆ ಅವರಿಗೆ ನೂರು ವರ್ಷ ತುಂಬಿದ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ, ಡಿ.2ರಂದು ಬೀದರ್ ಜಿಲ್ಲೆಯ ಭಾಲ್ಕಿಯ ಬಿಕೆಐಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ‘ಜನ್ಮಶತಮಾನೋತ್ಸವ’ ಹಾಗೂ ‘ಅಭಿನಂದನಾ ಗ್ರಂಥ’ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದೆ.
ಸಮಾರಂಭದ ದಿವ್ಯಸಾನಿಧ್ಯವನ್ನು ಹರ-ಗುರು-ಚರಮೂರ್ತಿಗಳು ವಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ 860 ಪುಟಗಳ ಒಳಗೊಂಡ ‘ಲೋಕನಾಯಕ’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಾಕ್ಷ್ಯಚಿತ್ರ ಲೋಕಾರ್ಪಣೆ ಮಾಡಲಿದ್ದಾರೆ. ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು, ಸಮಾಜದ ಗಣ್ಯರು, ಸಾಹಿತಿಗಳು, ವಿದ್ವಾಂಶರು, ಕಲಾವಿದರು ಭಾಗಿಯಾಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಇದನ್ನೂ ಓದಿ:ರಾಜ್ಯ ಸರ್ಕಾರ ಶೀಘ್ರ ವರದಿ ಪಡೆಯಲಿ: ಎಚ್.ಕಾಂತರಾಜ ಮನವಿ
ಶತಾಯುಷಿ ಡಾ.ಭೀಮಣ್ಣ ಖಂಡೆ ಅವರಿಗೆ ನೂರರ ಸಂಭ್ರಮ. ಎಲ್ಲ ಜಾತಿ, ಧರ್ಮದ ಏಳಿಗೆಗಾಗಿ ದುಡಿದಿದ್ದಾರೆ. ಮಹಾಸಭಾದ ಅಧ್ಯಕ್ಷರಾಗಿ ಸದಸ್ಯರ ಸಂಖ್ಯೆಯನ್ನು ಸಾವಿರದಿಂದ ಲಕ್ಷಕ್ಕೆ ಹೆಚ್ಚಿಸಿದ್ದಾರೆ. ಸದಾಶಿವನಗರದಲ್ಲಿ ಸಭಾಕ್ಕೆ ಜಾಗ ಖರೀದಿಸಿ, ಸ್ವಂತ ಕಟ್ಟಡ ಹೊಂದಲು ಕಾರಣೀಭೂತರಾದವರು. ಬೀದರ್ನ ಶಾಂತಿವರ್ಧಕ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.