ನವದೆಹಲಿ: ವಿಶ್ವಕ್ಕೀಗ ಭಾರತ ಆಪತ್ಬಾಂಧವ ಎನಿಸಿದೆ. ವೈದ್ಯಕೀಯ ನೆರವಿಗಾಗಿ ಅದರಲ್ಲೂ ಮುಖ್ಯವಾಗಿ ಒಂದು ಮಾತ್ರೆಗಾಗಿ 100ಕ್ಕೂ ಹೆಚ್ಚು ದೇಶಗಳು ಭಾರತದತ್ತಲೇ ಕೈಚಾಚಿವೆ.
ಕರೊನಾ ವಿರುದ್ಧ ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಸಂಸ್ಥೆಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಆದರೆ, ಇದು ಸಿದ್ಧವಾಗಲು ವರ್ಷಾಂತ್ಯದವರೆಗಾದರೂ ಕಾಯಬೇಕು. ಆದರೆ, ಸದ್ಯಕ್ಕೆ ಜೀವ ರಕ್ಷಕ ಎನಿಸಿರುವುದು ಮಲೇರಿಯಾ ಚಿಕಿತ್ಸೆಗಾಗಿ ಬಳಸಲಾಗುವ ಹೈಡ್ರೋಕ್ಸಿಕ್ಲೊರೋಕ್ವಿನ್ ಹಾಗೂ ಅಜಿಂತ್ರಾಮೈಸಿನ್ ಮಾತ್ರೆಗಳು.
ಕರೊನಾದಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ಈ ಮಾತ್ರೆಗಳನ್ನು ನೀಡಲಾಗುತ್ತಿದೆ. ಕರೊನಾದಿಂದ ತತ್ತರಿಸಿರುವ ವಿಶ್ವದ ಬಹುತೇಕ ರಾಷ್ಟ್ರಗಳು ಇದನ್ನೇ ನಂಬಿಕೊಂಡಿವೆ. ಈ ಮಾತ್ರೆ ನೀಡದಿದ್ದರೆ, ಭಾರತದ ವಿರುದ್ಧ “ಸೇಡು’ ತೀರಿಸ್ಕೊಳ್ತಿವಿ ಎನ್ನುವ ಮಟ್ಟಿಕ್ಕೆ ತೆರಳಿತ್ತು ಅಮೆರಿಕ.
ಭಾರತ ಈ ಮಾತ್ರೆಗಳ ರಫ್ತಿನ ಮೇಲೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಮೇಲೆ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಅನೇಕ ದೇಶಗಳಿಗೆ ಭಾರತವೇ ನೆರವಿನ ರೂಪದಲ್ಲಿ ಈ ಮಾತ್ರೆಗಳನ್ನು ಪೂರೈಸಿದೆ. ಜತೆಗೆ, ಜಾಗತಿಕವಾಗಿ ನಿರಂತರ ಬೇಡಿಕೆ ಪಡೆದಿದೆ ಈ ಮಾತ್ರೆ.
ಇಷ್ಟೆಲ್ಲ ಇದ್ದರೂ ಇದನ್ನು ಭಾರತದಲ್ಲಿ ಬಳಸುವುದು ಬೇಡ ಎಂದು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಹಾಗೆಂದು ಇದನ್ಯಾರೋ ಸಾಮಾನ್ಯ ವ್ಯಕ್ತಿ ದಾಖಲಿಸಿದ್ದಲ್ಲ, ಖ್ಯಾತ ವೈದ್ಯರೊಬ್ಬರು ಅರ್ಜಿ ದಾಖಲಿಸಿ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿಸಿದ್ದಾರೆ.
ಇಷ್ಟಕ್ಕೂ ಇವರ ವಾದವೇನು ಗೊತ್ತೆ? ಕೋವಿಡ್-19 ರೋಗಿಗಳಿಗೆ ಹೈಡ್ರೋಕ್ಸಿಕ್ಲೊರೋಕ್ವಿನ್ ಹಾಗೂ ಅಜಿಂತ್ರಾಮೈಸಿನ್ ಮಾತ್ರೆ ನೀಡುವುದರಿಂದ ಗುಣವಾಗುತ್ತೆ ಎಂಬುದು ಎಲ್ಲಿಯೂ ಸಾಬೀತಾಗಿಲ್ಲ ಹಾಗೂ ಶಿಫಾರಸು ಮಾಡಲಾಗುವ ಔಷಧಗಳ ಪಟ್ಟಿಯಲ್ಲೂ ಇದು ಸೇರಿಲ್ಲ. ಹೀಗಿದ್ದರೂ ಈ ಮಾತ್ರೆಗಳನ್ನು ರೋಗಿಗಳಿಗೆ ನೀಡಬಹುದೆಂದು ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಇದನ್ನು ತಡೆಯಬೇಕೆಂದು ಡಾ. ಕುನಾಲ್ ಸಾಹಾ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಡಾ. ಕುನಾಲ್ ಪೀಪಲ್ ಫಾರ್ ಬೆಟರ್ ಟ್ರೀಟ್ಮೆಂಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ.
ಈ ಮಾತ್ರೆ ಸೇವಿಸುವುದರಿಂದ ಹಲವಾರು ಅಡ್ಡಪರಿಣಾಮಗಳು ಉಂಟಾಗುತ್ತವೆ. ಹೈದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಜೀವಕ್ಕೆ ಮಾರಕವಾಗಿ ಪರಿಣಮಿಸಬಲ್ಲುದು ಎಂಬುದು ಸಂಶೋಧನೆಯಲ್ಲಿ ಕಂಡುಬಂದಿದೆ. ಈ ಬಗ್ಗೆ ಇಲಾಖೆ ಗಮನ ಸೆಳೆಯಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಸಾಗುವ ದಾರಿ ಇನ್ನೂ ದೂರವಿದೆ…. ಸಾಮಾನ್ಯ ಜನರ ಸಂಕಷ್ಟ ನಿವಾರಣೆಗೆ ಆರ್ಥಿಕ ತಜ್ಞರು ಹೇಳೋದೇನು?