ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಪತಿಯನ್ನು ಕೊಲೆ ಮಾಡಿ ಶೌಚದ ಗುಂಡಿಗೆ ಶವ ಎಸೆದಿದ್ದ ಮೃತನ ಪತ್ನಿ ಮತ್ತು ಆತನ ನಾದಿನಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೋಗಿಲು ಲೇಔಟ್ ನಿವಾಸಿಗಳಾದ ನಾಜೀಯಾ ಖಾತ್ಮುಂ ಮತ್ತು ಆಕೆಯ ತಂಗಿ ಕಾಶೀರಿ ಖಾತ್ಮುಂ ಬಂಧಿತರು. ಕೆಲ ದಿನಗಳ ಹಿಂದೆ ಶಕೀಲ್ ಅಖ್ತರ್ ಸೈಫಿನನ್ನು ಹತ್ಯೆ ಮಾಡಿದ್ದರು. ತನಿಖೆ ವೇಳೆ ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018ರಲ್ಲಿ ಖಾಸಗಿ ಕಂಪನಿ ನೌಕರ ಶಕೀಲ್ ಮತ್ತು ನಾಜೀಯಾ ಮದುವೆಯಾಗಿ ಕೋಗಿಲು ಲೇಔಟ್ನಲ್ಲಿ ನೆಲೆಸಿದ್ದರು. ಪರಸ್ತ್ರೀ ಜತೆ ಶಕೀಲ್ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಪ್ರಶ್ನೆ ಮಾಡುತ್ತಿದ್ದ ಪತ್ನಿ ಮೇಲೆ ಗಲಾಟೆ ಪ್ರತಿದಿನ ಹಲ್ಲೆ ಮಾಡಿ ಕಿರುಕುಳ ಕೊಡುತ್ತಿದ್ದ. ಈ ವಿಚಾರವನ್ನು ನಾಜೀಯಾ, ತನ್ನ ತಂಗಿ ಕಾಶ್ಮೀರಿ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ದೌರ್ಜನ್ಯದಿಂದ ಬೇಸತ್ತು ಪತಿ ಕೊಲೆಗೆ ನಾಜೀಯಾ ನಿರ್ಧರಿಸಿದ್ದು, ಈ ಕೃತ್ಯಕ್ಕೆ ಆಕೆಯ ತಂಗಿ ಸಾಥ್ ಕೊಟ್ಟಿದ್ದಳು.
ಅ.10ರ ರಾತ್ರಿ ಮನೆಯಲ್ಲಿ ಗಲಾಟೆ ಶುರು ಮಾಡಿದ ಪತಿ ವಿರುದ್ಧ ನಾಜೀಯಾ ತಿರುಗಿ ಬಿದ್ದಿದ್ದಾಳೆ. ನಿದ್ರೆಗೆ ಜಾರಿದ ಆತನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಅಕ್ಕ-ತಂಗಿ, ಶವವನ್ನು ಬೆಡ್ಶೀಟ್ ಸುತ್ತಿಕೊಂಡು ಮನೆ ಮುಂದಿನ ಶೌಚದ ಗುಂಡಿಗೆ ಎಸೆದಿದ್ದರು. 2 ದಿನಗಳ ಬಳಿಕ ಶವ ಕೊಳೆತು ವಾಸನೆ ಬಂದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮತ್ತೊಂದೆಡೆ ಸೋದರ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಸಂಪಿಗೆಹಳ್ಳಿ ಠಾಣೆಗೆ ಮೃತನ ಸೋದರ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಮೃತನ ಪತ್ನಿಯನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.