ಬೆಂಗಳೂರು: ಪೊಲೀಸರು ದರ್ಪಬಿಟ್ಟು ಜನಸ್ನೇಹಿ ಸೇವೆ ಕೆಲಸ ಮಾಡಬೇಕು. ಠಾಣೆಗೆ ಬರುವ ಜನರ ಜೊತೆಗೆ ಸೌಜನ್ಯ, ಗೌರವದಿಂದ ನಡೆದುಕೊಂಡು ಧೈರ್ಯ ತುಂಬಿ ಪ್ರಮಾಣಿಕವಾಗಿ ಅವರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡಕ್ ಎಚ್ಚರಿಕೆ ನೀಡಿದರು.
ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಸುದ್ದಿಗಾರರ ಜತೆಗೆ ಮಾತನಾಡಿದರು. ಸ್ವಂತ ಅನುಭವದಿಂದ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೆನೆ. ಬಹುತೇಕ ಪೊಲೀಸ್ ಜನರ ಮೇಲೆ ದರ್ಪ ತೋರಿಸುತ್ತಿದ್ದಾರೆ.
ನಾಡಿನ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಪೊಲೀಸರಲ್ಲಿ ಬದಲಾವಣೆ ನಮ್ಮ ಸರ್ಕಾರ ಬಯಸಲಿದೆ. ಸಂಪೂರ್ಣ ಅಪರಾಧ ತಡೆಗಟ್ಟಲು ಸಾಧ್ಯವಿಲ್ಲ. ಆದರೆ, ಕಟ್ಟಕಡೆಯ ಮನುಷ್ಯನಿಗೆ ನ್ಯಾಯ ಸಿಗಬೇಕು. ಶಾಂತಿ, ನೆಮ್ಮದಿಯಿಂದ ಬದುಕಲು ವಾತಾವರಣ ನಿರ್ಮಿಸಬೇಕು. ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಕಾಪಾಡಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಿಎಂ ತಿಳಿಸಿದರು.
ಕಾನೂನು ಸುವ್ಯವಸ್ಥೆ ಸರಿ ಇದ್ದರೇ ರಾಜ್ಯದ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಸುಳ್ಳು ಸುದ್ದಿ ಹರಡುವ, ಜೂಜಾಟ, ಕ್ಲಬ್, ಡ್ರಗ್ಸ್, ಬೆಟ್ಟಿಂಗ್ ಸೇರಿದಂತೆ ದಂಧೆಗಳಿಗೆ ಕಡಿವಾಣ ಬೀಳಬೇಕು. ಆಯಾ ಠಾಣಾಧಿಕಾರಿ ಗಮನಕ್ಕೆ ಬಾರದೆ ಯಾವುದೇ ಅಪರಾಧ ನಡೆಯುವುದಿಲ್ಲ.
ಮನೆ, ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೇ ಸಾಲದು. ಡಿಸಿಪಿ, ಎಸ್ಪಿಗಳು ಖುದ್ದು ಠಾಣೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಗಸ್ತು ಹೆಚ್ಚಿನ ಜನಸ್ನೇಹಿ ಪೊಲೀಸಿಂಗ್ ವ್ಯವಸ್ಥೆ ಕಲ್ಪಿಸಿ ಜನರಲ್ಲಿ ಭರವಸೆ ಮೂಡಿಸಬೇಕೆಂದು ಸೂಚಿಸಿರುವುದಾಗಿ ಮಾಹಿತಿ ನೀಡಿದರು.
ಕಾನೂನು ಉಲ್ಲಂಘನೆ ಮತ್ತು ತಪ್ಪು ಮಾಡಿದರೇ ಕೇವಲ ಕೆಳಹಂತಹ ಅಧಿಕಾರಿಗಳ ವಿರುದ್ಧ ಮಾತ್ರ ಶಿಕ್ಷೆ ವಿಧಿಸುವುದಿಲ್ಲ.ಜೊತೆಗೆ ಆಯಾ ಡಿಸಿಪಿ, ಎಸ್ಪಿ ವಿರುದ್ಧವೂ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಉತ್ತಮ ಕೆಲಸ ಮಾಡಿದರೇ ಪ್ರಸಂಶೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡುವ ಕೆಲಸ ಸಹ ಮಾಡುತ್ತೆವೆ.
ಯುವ ಪೀಳಿಗೆಯ ಭವಿಷ್ಯ ಹಾಳು ಮಾಡುತ್ತಿರುವ ಮಾದಕ ದ್ರವ್ಯ ಮಾರಾಟ, ಸಾಗಾಟ ಮತ್ತು ಸೇವೆ ವಿರುದ್ಧ ರಾಜ್ಯ ವ್ಯಾಪಿ ವಿಶೇಷ ಅಭಿಯಾನ ನಡೆಸುವಂತೆ ಡಿಜಿಪಿ ಡಾ.ಅಲೋಹ್ ಮೋಹನ್ಗೆ ವೇದಿಕೆ ಮೇಲೆಯೇ ಸೂಚನೆ ನೀಡಿದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿ, ಪ್ರಚೋದಾತ್ಮಕ ಮತ್ತು ದ್ವೇಷ ಭಾಷಣ ಮಾಡುವರ ವಿರುದ್ಧ ದೂರು ಬರುವುದನ್ನು ಕಾಯಬೇಕಿಲ್ಲ. ಕಾನೂನು ಪ್ರಕಾರ ಸ್ವಯಂ ದೂರು ದಾಖಲು ಮಾಡಿಕೊಂಡು ಎ್ಐಆರ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ, ಕಟ್ಟಾಜ್ಞೆ ಮಾಡಿದರು.