ಬೆಂಗಳೂರು: ರಾಮನಗರ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ಶಾಕ್ ನೀಡಲು ಆಡಳಿತಾರೂಢ ಬಿಜೆಪಿ ಮೆಗಾ ಪ್ಲಾನ್ ಮಾಡಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಪಾಲ ಬೆಟ್ಟದಲ್ಲಿ ಕಾನೂನು ಬಾಹಿರವಾಗಿ ಯೇಸು ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕಪಾಲ ಬೆಟ್ಟವನ್ನು ಕ್ರೈಸ್ತ ಸಂಸ್ಥೆಗೆ ಮಂಜೂರಾತಿ ಮಾಡಿರುವುದನ್ನು ರದ್ದುಗೊಳಿಸಿ, ಬೆಟ್ಟವನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಲು ಪ್ಲಾನ್ ನಡೆದಿದೆ ಎಂದು ಹೇಳಲಾಗಿದೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ಒಟ್ಟು 46 ಪ್ರದೇಶವನ್ನು ಪ್ರಾಧಿಕಾರ ಗುರುತಿಸಿದೆ. ಈಗ ಅದಕ್ಕೆ ಕಪಾಲಬೆಟ್ಟವನ್ನು ಸೇರಿಸಿ ಅಭಿವೃದ್ಧಿ ಪಡಿಸಲು ಮೆಗಾ ಪ್ಲಾನ್ ನಡೆಯುತ್ತಿದೆ. ಈ ಕುರಿತು ರಾಮನಗರ ಬಿಜೆಪಿ ಮುಖಂಡರು ಕೂಡ ಸರ್ಕಾರಕ್ಕೆ ಮನವಿ ಪತ್ರ ಕೊಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಕಪಾಲ ಬೆಟ್ಟದ ಯೇಸು ಪ್ರತಿಮೆ ನಿರ್ಮಾಣ ಪ್ರಕರಣದ ಬಗ್ಗೆ ರಾಮನಗರ ಜಿಲ್ಲಾ ಬಿಜೆಪಿ ವರದಿ ಸಿದ್ಧಪಡಿಸಿದೆ. ಕಾನೂನು ಬಾಹಿರವಾಗಿ ಯೇಸು ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಜತೆಗೆ ಕಪಾಲ ಬೆಟ್ಟವನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ತರಬೇಕೆಂದು ರಾಮನಗರ ಬಿಜೆಪಿ ಮುಖಂಡರು ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಆ ವರದಿ ಮೇಲೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಪಾಲ ಬೆಟ್ಟವನ್ನು ಸೇರಿಸಿ ಅಭಿವೃದ್ಧಿ ಪಡಿಸಲು ಪ್ಲಾನ್ ನಡೆದಿದ್ದು, ಆ ಮೂಲಕ ಡಿ.ಕೆ.ಶಿವಕುಮಾರ್ಗೆ ಶಾಕ್ ನೀಡಲು ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)