ಕೊಪ್ಪಳ: ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಡುವಂತಾಯಿತು.
ವಾರದಿಂದ ಜಿಲ್ಲೆಯಲ್ಲಿ ಮಳೆ ಬೀಳುವ ಸೂಚನೆ ಇದ್ದರೂ ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ವರುಣ ಕೃಪೆ ತೋರಿರಲಿಲ್ಲ. ಮೋಡ ಕವಿದರೂ ಮಳೆಯಾಗದೆ ಜನರು ಕಂಗಾಲಾಗುವಂತಾಗಿತ್ತು. ಶನಿವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆ ಬೀಳುವ ಮೂಲಕ ಬಿಸಿಲಿನಿಂದ ಕಾದಿದ್ದ ಇಳೆ ತಂಪಾಗುವಂತಾಯಿತು. ಜನರ ಮೊಗದಲ್ಲಿ ಮಂದಹಾಸ ಮೂಡಿತು. ವರ್ಷದ ಮೊಲದ ಮಳೆ ಸುರಿದಿದ್ದರಿಂದ ರೈತಾಪಿ ವರ್ಗದಲ್ಲಿ ಮುಂಬರುವ ಮಳೆಗಳು ಬರುವ ಸೂಚನೆ ಸಿಕ್ಕಂತಾಗಿದೆ.
ನಗರದ ಮುಖ್ಯ ರಸ್ತೆಗಳು ನೆನೆದು ಚರಂಡಿಗೆ ಅಲ್ಪ ಪ್ರಮಾಣದ ನೀರು ಹರಿಯುವಂತಾಯಿತು. ಕೆಲವರು ಮಳೆಯಲ್ಲಿ ನೆನೆದರೆ, ಇನ್ನು ಕೆಲವರು ರಸ್ತೆ ಅಕ್ಕಪಕ್ಕದ ಅಂಗಡಿಗಳ ಶೆಡ್ಗಳಲ್ಲಿ ನಿಂತು ಆಶ್ರಯ ಪಡೆದರು. ಅನೇಕರು ಮಳೆ ಕಂಡು ಹರ್ಷ ವ್ಯಕ್ತಪಡಿಸಿದರು. ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಯುಗಾದಿ ಹೊಸ ವರ್ಷದಲ್ಲಿ ಜನರಿಗೆ ಹೊಸ ಹರ್ಷ ತಂದಿದೆ.