ಕೊಪ್ಪಳ:ನಿರುಪಯುಕ್ತ ಕೊಳವೆ ಬಾವಿ ಮುಚ್ಚಿದರೆ 500 ರೂ. ಪ್ರೋತ್ಸಾಹಧನ ನೀಡಲು ರೈತರೊಬ್ಬರು ಮುಂದಾಗಿದ್ದು, ಇತರರಿಗೆ ಮಾದರಿ ಆಗಿದ್ದಾರೆ.
ಗಂಗಾವತಿ ತಾಲೂಕಿನ ಶಿವಣ್ಣ ಚಳ್ಳಕೆರೆ 2017ರಿಂದಲೂ ಈ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಲ್ಲಲ್ಲಿ ಕೊಳವೆ ಬಾವಿಯಲ್ಲಿ ಮಕ್ಕಳು ಬಿದ್ದು ಸಾಯುವುದರಿಂದ ಮನಸ್ಸಿಗೆ ಘಾಸಿಯಾಗಿ ಈ ಕಾರ್ಯ ಮಾಡುತ್ತಿದ್ದಾರೆ. ವಯಸ್ಸಾದ ಕಾರಣ ಇತ್ತೀಚೆಗೆ ಕೈ ಬಿಟ್ಟಿದ್ದರು. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ 2 ವರ್ಷದ ಸಾತ್ವಿಕ ಕೊಳವೆ ಬಾವಿಗೆ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಟನೆ ಜರುಗುತ್ತಲೇ ಶಿವಣ್ಣ ತಮ್ಮ ಕಾರ್ಯಕ್ಕೆ ಮರು ಚಾಲನೆ ನೀಡಲು ಮುಂದಾಗಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ 400&500 ಕೊಳವೆ ಬಾವಿ ಮುಚ್ಚಿಸಲಾಗಿದೆ. ಪ್ರೋತ್ಸಾಹಧನ ನೀಡುವ ಜತೆಗೆ ಬೀದಿ ನಾಟಕಗಳ ಮೂಲಕವೂ ಜಾಗೃತಿ ಮೂಡಿಸಿರುವುದು ವಿಶೇಷ. ರೈತರು ತಮ್ಮ ಹೊಲದಲ್ಲಿನ ನಿರುಪಯುಕ್ತ ಕೊಳೆವೆ ಬಾವಿ ಮುಚ್ಚಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ದೃಢೀಕರಣ, ಸರ್ವೇ ನಂಬರ್, ಆಧಾರ್ ಕಾರ್ಡ್ ಮಾಹಿತಿ ಒದಗಿಸಿದಲ್ಲಿ ಅವರಿಗೆ 500 ರೂ. ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದ್ದಾರೆ. ರೈತರು ಕೊಳವೆ ಬಾವಿ ಮುಚ್ಚಿದಲ್ಲಿ 88613 18934 ಸಂಖ್ಯೆಗೆ ಸಂಪರ್ಕಿಸಬಹುದು.