ಕೊಪ್ಪಳ: ಕೋವಿಎ್ ಸಮಯದಲ್ಲಿ ನಡೆದ ಹಗರಣ, ಪಿಎಸ್ಐ ಹಗರಣ ತನಿಖೆಗಾಗಿ ಆಯೋಗ ರಚಿಸಿದ್ದು, ಆಯೋಗದ ಮುಂದೆ ಯತ್ನಾಳ್ ದಾಖಲೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಸಾಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಕೋವಿಡ್ ಸಮಯದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣ ಕುರಿತು ತನಿಖೆಗಾಗಿ ಆಯೋಗ ರಚಿಸಿದ್ದೇವೆ. ಆರೋಪ ಮಾಡುವವರು ಆಯೋಗಕ್ಕೆ ದಾಖಲೆ ನೀಡಲಿ. ತನಿಖೆ ನಡೆಸುತ್ತೇವೆ ಎಂದರು.
ರಾಯರಡ್ಡಿ ಆರ್ಥಿಕವಾಗಿ ತಿಳಿದುಕೊಂಡಿದ್ದಾರೆ. ಹಾಗಾಗಿ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ಯಡಿಯೂರಪ್ಪ ಸಿಎಂ ಇದ್ದಾಗಲೂ ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿದ್ದರು. ಆವಾಗ ಯಾಕೆ ಯಾರೂ ಪ್ರಶ್ನಿಸಲಿಲ್ಲ ಎಂದು ವಿರೋಧಿಗಳನ್ನು ಪ್ರಶ್ನಿಸಿದರು.
ಮಾಜಿ ಸಿಎಂ ಕುಮಾರ ಸ್ವಾಮಿ ಆರೋಪಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಡಿಸಿ ವಿರುದ್ಧ ಗರಂ ಆದ ಸಿಎಂ : ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಕೆಲ ತಿಂಗಳಿಂದ ಅನುದಾನ ಬಂದಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಕೊಪ್ಪಳದಲ್ಲಿ ಯಾಕೆ ಅನುದಾನ ಬಂದಿಲ್ಲ ಎಂದು ಡಿಸಿ ನಲಿನ್ ಅತುಲ್ ಗೆ ಪ್ರಶ್ನಿಸಿದರು. ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದರು. ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಗರಂ ಆದರು.