More

    ರಾಜಧರ್ಮ ರಾಜನೀತಿ: ಮತ್ತೆ ಶುರುವಾಯಿತು ರಾಮವಿರೋಧಿಗಳ ಪ್ರಲಾಪ!

    ರಾಜಧರ್ಮ ರಾಜನೀತಿ: ಮತ್ತೆ ಶುರುವಾಯಿತು ರಾಮವಿರೋಧಿಗಳ ಪ್ರಲಾಪ!

    ಬಾಬರ್ ಸತ್ತ ಮೇಲೂ ಹುಮಾಯೂನ್ ಕಾಲದಲ್ಲೂ 10 ಸಾವಿರ ಸೂರ್ಯವಂಶೀ ಕ್ಷತ್ರಿಯರು ಅಯೋಧ್ಯೆ ಕ್ಷೇತ್ರ ಪಡೆಯಲು ಹೋರಾಡಿದರು. ಆಗ ಸುತ್ತಮುತ್ತಲ ಮುಸ್ಲಿಂ ಕಟ್ಟಡಗಳನ್ನು ಇವರು ಕೆಡವಿ, ಬಾಬ್ರಿ ಗುಮ್ಮಟದ ಮಹಾದ್ವಾರವನ್ನೂ ವಶಪಡಿಸಿಕೊಂಡದ್ದು ಇತಿಹಾಸ. ಈ ಭಕ್ತರನ್ನು ಹುಮಾಯೂನ್ ಸೇನೆ ಕೊಂದಿತು. ಅಕ್ಬರನ ಕಾಲದಲ್ಲೂ ಹೋರಾಟ ಮುಂದುವರಿಯಿತು.

    ಶ್ರೀರಾಮಾಯಣದಿಂದ ನಾನು ಸದಾ ಕಲಿಯುತ್ತಿರುವ ಪಾಠವೇನೆಂದರೆ, ರಾವಣ, ಮಾರೀಚ, ಶೂರ್ಪಣಖೆಯರು, ರಾಮವಿರೋಧಿಗಳು ಸಾಯುವುದೇ ಇಲ್ಲ ಎಂದು. ರಾಮ ಜನ್ಮಭೂಮಿ ಈಗಲೇನೋ ಭಾರತೀಯ ಸಂಜಾತ ಹಿಂದೂಗಳ ವಶಕ್ಕೆ ಬಂದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಶಿಲಾನ್ಯಾಸವೂ ಆಯಿತು! ಇದರ ಹಿಂದೆ 500 ವರ್ಷಗಳ ರಕ್ತಸಿಕ್ತ ಚರಿತ್ರೆ ಇದೆ. ಹತ್ತನೇ ಶತಮಾನದಲ್ಲಿ ವಿಕ್ರಮಾದಿತ್ಯ ಚಕ್ರವರ್ತಿ ನಿರ್ವಿುಸಿದ್ದ ರಾಮ ದೇಗುಲ ಇತ್ತು. ಕೆಡವಿದವನು ಬಾಬರ್. ಈಗ ಮೋದಿ ಪುನರ್ನಿರ್ವಪಕರು. ಯಾರ ಗಂಟು ಹೋಯಿತು? ಪಾಕಿಸ್ತಾನ, ಟರ್ಕಿಗಳಿಗೆ ಏಕೆ ಕೋಪ? ಕಾಂಗ್ರೆಸ್​ಗೆ, ಎಡಪಂಥೀಯರಿಗೇಕೆ ಕೋಪ? ಕರ್ನಾಟಕ ಸಂಗೀತದ ದಿಗ್ಗಜ, ದಿಕ್ಕು ತಪ್ಪಿದ ಟಿ.ಎಂ.ಕೃಷ್ಣ-‘ಶೇಮ್ುಲ್ ಡೇ’ ಎಂದರಲ್ಲ? ಹಿಂದೂ? ಇವರು ಮತಾಂತರಿತರೇ? ‘ರಾಮೊನ್ ಮ್ಯಾಗ್ಸೆಸೆ’ ಅವಾರ್ಡ್ ಸಂಪಾದಿಸಿದ ಅಮರ್ತ್ಯ ಸೇನರ ಸಾಲಿಗೆ ಇವರೂ ಸೇರಿದರೇಕೆ? ಆ ‘ಅವಾರ್ಡ್’ ಸಂಪಾದಿಸಿದ ಇನ್ನೊಬ್ಬ ಹಿಂದಣ ‘ಇಸ್ಲಾಂ ಈಸಾಯಿ ವಿರೋಧಿ’ ಹಲವು ಗ್ರಂಥ ಬರೆದ ಅರುಣ ಶೌರಿಯವರು ದಿಢೀರನೆ-ಈಗ ಮೋದಿ ವಿರೋಧಿಯಾದುದು ಹೇಗೆ? ಅಪರೂಪಕ್ಕೆ ಗಣ್ಯರಿಗೂ ಸಿಕ್ಕ ಈ ಅವಾರ್ಡನ ಚರಿತ್ರೆ, ಹಿನ್ನೆಲೆ ಏನು?

    ಇದು ಇರಲಿ: ಈಗ ಹೊಸ ಅಬ್ಬರ ಸೃಷ್ಟಿಯಾಗಿದೆ. ಶ್ರೀರಾಮ ‘ಹಿಂದೂ ಫಂಡಮೆಂಟಲಿಸ್ಟ್’ ಅಂತ ‘ಮೆಂಟಲ್’ಗಳ ಅಬ್ಬರ! ಅದಕ್ಕೆ ಎಸ್.ಗುರುಮೂರ್ತಿಯವರು ಉತ್ತರಿಸಿದ್ದು ಟಿ.ವಿ.ಗಳಲ್ಲಿ ಬಂದಿದೆ. ಈ ವಿವಾದ ಈಗ ಮತ್ತೆ ಏಕೆ? ಉತ್ತರ: ಹೊಟ್ಟೆಯುರಿ. ಹಲವು ಪಕ್ಷಗಳಿಗೆ, ವೋಟುಬ್ಯಾಂಕುಗಳಿಗೆ ಹೊಡೆತ. ಎಲ್ಲ ‘ಕ್ರೆಡಿಟ್’ ಮೋದಿಯವರಿಗೇ!- ಇದು ಕಾಂಗ್ರೆಸ್ ಸಂಕಷ್ಟ! ನಿಮ್ಮದೇ ಪಕ್ಷ ಅಧಿಕಾರದಲ್ಲಿ ಇದ್ದಾಗ ನೀವೇ ಈ ಕ್ರೆಡಿಟ್ ಪಡೆಯಬಹುದಿತ್ತಲ್ಲ? ರಾಜೀವ್ ಗಾಂಧಿಗೆ ರಾಮನೂ ಗೊತ್ತಿಲ್ಲ, ರಾವಣನೂ ಗೊತ್ತಿಲ್ಲದೆ ಬಾಬ್ರಿ ಬೀಗಗಳನ್ನು ತೆರೆಸಿದರಲ್ಲ? ಷಾ ಬಾನೋ ಪ್ರಕರಣದ ಪಕ್ಷಪಾತ ಆರೋಪ ತೊಡೆಯಲು ಮಾಡಿದ ‘ಟ್ರಿಕ್ಕು’, ರಾಮಪ್ರೀತಿಗಲ್ಲ! ಪಿ.ವಿ.ನರಸಿಂಹರಾಯರು ‘ಬಾಬ್ರಿ’ ಒಡೆಯಲು ಮೌನ ಸಹಕಾರ ನೀಡಿದರಲ್ಲ? ಆಗ ‘ಕ್ರೆಡಿಟ್’ ಏಕೆ ಪಡೆಯಲಿಲ್ಲ? ಅವರಿಗೇಕೆ ಅಪಮಾನ ಮಾಡಿದಿರಿ? ಅಲ್ಲಿ ಮುಸ್ಲಿಂ ಸಮುದಾಯ ಕೋಪ ಶಮನಕ್ಕೆ ರಾಯರಿಗೆ ಶಿಕ್ಷೆ! ‘ಎತ್ತಿಗೆ ಜ್ವರ, ಎಮ್ಮೆಗೆ ಬರೆ’. ಇದಲ್ಲವೆ, ನಿಮ್ಮ ಪಾಲಿಸಿ! ಈಗ ಕಾಮ್ರೇಡರು, ಕಾಂಗ್ರೆಸ್ಸು ಇತರರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಅವರಿಗಾಗಿ ಸ್ವಲ್ಪ ಚರಿತ್ರೆ ಹೇಳುತ್ತೇನೆ.

    ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಂ ಎಂಬ ಆಂಗ್ಲ ಇತಿಹಾಸಕಾರನ ದಾಖಲೆ ಹೀಗೆ: ಅದು ಲಖನೌ ಗೆಜೆಟಿಯರ್​ನಲ್ಲಿದೆ. ಬಾಬರನ ಸೇನಾನಿ ಮೀರ್ ಬಾಕಿ, ಅಯೋಧ್ಯಾ ರಾಮಮಂದಿರವನ್ನು ನೆಲಸಮ ಮಾಡಿದಾಗ, ಪ್ರತಿಭಟಿಸಿದ 1.74 ಲಕ್ಷ ಜನರನ್ನು ಕೊಂದು ಹಾಕಿದ! ಬಾಬರ್ ಸೇನೆಯಲ್ಲಿ ಫಿರಂಗಿಗಳಿದ್ದವು. ಭಾರತೀಯರಲ್ಲಿ ಇರಲಿಲ್ಲ. ಆಗೊಬ್ಬ ಮೋದಿ ಇರಲಿಲ್ಲ. ಶವಗಳು ಆಕಾಶದೆತ್ತರಕ್ಕೆ ರಾಶಿಯಾಗಿದ್ದವು. ಅದೇ ಗೆಜೆಟಿಯರ್​ನಲ್ಲಿ ಹ್ಯಾಮಿಲ್​ಟನ್ ಎಂಬ ಇನ್ನೊಬ್ಬ ದಾಖಲೆದಾರ ಬರೆದದ್ದು-‘ಲಾಹೋರಿನಿಂದ ತಂದ ಕಲ್ಲುಗಳನ್ನು ಹಿಂದೂ ರಕ್ತದಲ್ಲಿ ಅದ್ದಿ, ಅಲ್ಲಿ ಬಾಬ್ರಿ ಗುಮ್ಮಟಗಳು ಎಬ್ಬಿಸಲ್ಪಟ್ಟವು’ ಅಂತ. ಈ ಮಂದಿರ ನಿರ್ನಾಮಕ್ಕೆ ಪ್ರೇರಕ ಯಾರು? ಕಾಜಲ್, ಅಬ್ಬಾಸ್, ಮೂಸಾ, ಆಶೀ ಖಾನ್ ಎಂಬ ಮತಾಂಧ ಮೌಲ್ವಿ.

    ಇಡೀ ಅಯೋಧ್ಯೆ ಇನ್ನೊಂದು ಮೆಕ್ಕಾ ಆಗಬೇಕೆಂದು ಮೌಲ್ವಿಯ ಹುಚ್ಚು ಆಸೆ. ಇದೆಲ್ಲ ಬಾಬರನೇ ಬರೆದುಕೊಂಡ ‘ಬಾಬರ್​ನಾಮಾ’ ಆತ್ಮಚರಿತ್ರೆಯಲ್ಲಿದೆ. ಹಿಂದೆ ಈ ದಾಖಲೆಗೆ ಹುಡುಕಾಟ ನಡೆದಾಗ ಒಂದು ಮುಸ್ಲಿಂ ಭಂಡಾರದಲ್ಲೂ ಮೂಲ ಪ್ರತಿ ಸಿಗದಂತೆ-ಅಯೋಧ್ಯೆಗೆ ಸಂಬಂಧಿತ ಪುಟಗಳನ್ನೆಲ್ಲ ಹರಿದು ಹಾಕಿಯೂ, ಆಗಿನ್ನೂ ಬುದ್ಧಿ ನೆಟ್ಟಗಿದ್ದ ಅರುಣ್ ಶೌರಿಯವರು ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ದೊರೆತ ಒಂದೇ ಒಂದು ಮೂಲ ಸಮಗ್ರ ಬಾಬರ್ ನಾಮಾದಿಂದ ದಾಖಲೆ ಒದಗಿಸಿ ಪುಸ್ತಕ ಬರೆದರು! ‘ಬಾಬರನಿಗೂ ಇದಕ್ಕೂ ಸಂಬಂಧವಿಲ್ಲ’ ಅಂತ ಆಗಿನ ಶಹಾಬುದ್ದಿನ್ ಸಾಹೇಬರು ಶತಪ್ರಯತ್ನ ಮಾಡಿದ್ದರು. ಅವರು ‘ಬಾಬ್ರಿ ಮಸೀದಿ ಆಕ್ಷನ್ ಕಮಿಟಿ’ ಅಧ್ಯಕ್ಷರಾಗಿದ್ದು, ಆಗ ಹೇಳಿದ್ದು, ‘ಅಲ್ಲಿ ರಾಮ ದೇವಾಲಯ ಇತ್ತೆಂದು ಪ್ರಮಾಣಿಸಿ, ಮಸೀದಿ ಅದರ ಮೇಲೆ ಎಬ್ಬಿಸಲ್ಪಟ್ಟು ಗುಮ್ಮಟ ಏರಿತ್ತೆಂದು ತೋರಿಸಿದರೆ, ಮುಂದೆ ಕಟ್ಟುವ ರಾಮ ದೇವಾಲಯಕ್ಕೆ ನಾನೇ ಮೊದಲ ಇಟ್ಟಿಗೆ ಇಡುತ್ತೇನೆ’ ಅಂತ. ಅವರಿಲ್ಲ ಈಗ! ಕಾಂಗ್ರೆಸ್ಸು ಇದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದೆ-ಭಾರತವನ್ನು ಒಡೆಸಿದ ಪಕ್ಷ! ಕಾಮ್ರೇಡರೂ, ಸೆಕ್ಯುಲರಿಸ್ಟರೂ, ಎಲ್ಲ ಎಡಪಂಥೀಯರೂ ಇದ್ದಾರೆ.

    ಈಗ ಭಯ. ಆಗ ಬಾಬರ್ ಸತ್ತ ಮೇಲೂ ಹುಮಾಯೂನ್ ಕಾಲದಲ್ಲೂ 10 ಸಾವಿರ ಸೂರ್ಯವಂಶೀ ಕ್ಷತ್ರಿಯರು ಕ್ಷೇತ್ರ ಪಡೆಯಲು ಹೋರಾಡಿದರು. ಆಗ ಸುತ್ತಮುತ್ತಲ ಮುಸ್ಲಿಂ ಕಟ್ಟಡಗಳನ್ನು ಇವರು ಕೆಡವಿ, ಬಾಬ್ರಿ ಗುಮ್ಮಟದ ಮಹಾದ್ವಾರವನ್ನೂ ವಶಪಡಿಸಿಕೊಂಡದ್ದು ಇತಿಹಾಸ. ಈ ಭಕ್ತರನ್ನು ಹುಮಾಯೂನ್ ಸೇನೆ ಕೊಂದಿತು. ಫಿರಂಗಿ ಇತ್ತಲ್ಲ? ಅಕ್ಬರನ ಕಾಲದಲ್ಲೂ ಹೋರಾಟ ಮುಂದುವರಿಯಿತು. ‘ರಾಮ್ ಚಬೂತ್ರಾ’ ಭಜನೆಯ ಜಾಗಕ್ಕೆ ಅಕ್ಬರ್ ಸಮ್ಮತಿಸಿದ. 24 ಗಂಟೆ ಅಹೋರಾತ್ರ ರಾಮಭಜನೆ! ನಾನು 1989ರಲ್ಲಿ ಇದನ್ನು ನೋಡಿದ್ದೇನೆ. ಅಲ್ಲಿ ‘ರಾಮ ಲಲ್ಲಾ’ ಇಡಲೂ ಅಕ್ಬರ್ ಸಮ್ಮತಿಸಿದ್ದ. ಇದಕ್ಕೆ ಮುಸ್ಲಿಂ ಮತಾಂಧರು ಅಡ್ಡಿಮಾಡಿದಾಗ, ಮತ್ತೆ ಹೋರಾಟ, ಹಿಂದೂ ಮಾರಣ ಹೋಮ. ಆದರೂ, ಅಕ್ಬರನಿಗೆ ರಾಜಾ ಬೀರ್​ಬಲ್, ರಾಜಾ ತೊದರಮಲ್ ಇಲ್ಲಿ ಅವಕಾಶಕ್ಕೆ ಶಿಫಾರಸ್ಸು! ಆ ‘ಚಬೂತ್ರಾ’ ಆಗ ಒಂದು ದೇವಾಲಯವೇ ಆಯ್ತು. ಇದನ್ನು ‘ಐನೇ ಅಕ್ಬರೀ’ ಚರಿತ್ರೆ ದಾಖಲಿಸಿದೆ. ಈ ಏರ್ಪಾಡಿಗೆ ಜಹಾಂಗೀರ್, ಷಾಜಹಾನ್ ಅಡ್ಡಿ ಬರಲಿಲ್ಲ. ಮತ್ತೆ ಔರಂಗಜೇಬನ ಕಾಲದಲ್ಲಿ ತಕರಾರು. ಅವನ ಸೇನೆಯಿಂದ ರಕ್ಷಿಸಲು ‘ರಾಮ ಲಲ್ಲಾ’ನನ್ನು ಸುರಕ್ಷಿತ ಜಾಗಕ್ಕೆ ಒಯ್ಯಲಾಯ್ತು. ಆಗ ಸಮರ್ಥ ರಾಮದಾಸರ ಶಿಷ್ಯ, ವೈಷ್ಣವದಾಸರು, ಅಯೋಧ್ಯೆಯ ಅಹಲ್ಯಾ ಘಾಟ್​ನಲ್ಲಿ ಪರಶುರಾಮ ಆಶ್ರಮದಲ್ಲಿದ್ದರು. ಅದರಲ್ಲಿ 10 ಸಾವಿರ ಸಾಧು, ಮಹಾಂತರ ಸೇನೆಯೇ ಇತ್ತು. ಏಳು ದಿನ ಯುದ್ಧದಲ್ಲಿ-ಊರ್ವಶೀ ಕುಂಡದಲ್ಲಿ-ಮೊಗಲ್ ಸೇನೆ ಓಡಿತ್ತು. ಮಹಾಂತರ ಮಠಗಳು ‘ಅಖಾಡಾ’=ಅಖಾರ ಆದುದು ಹೀಗೆ.

    1664ರಲ್ಲಿ ಔರಂಗಜೇಬ್ ಆ 10 ಸಾವಿರ ಸಂತರನ್ನೂ ಕೊಲ್ಲಿಸಿದ. ಶವಗಳನ್ನು ಒಂದು ಬಾವಿಯಲ್ಲಿ ಎಸೆದರು. ‘ಆ ಬಾವಿ’ ನಮ್ಮದು ಅಂತ ಈಗಲೂ ಮುಸ್ಲಿಂರ ಗೊಣಗಾಟ. ಅಲ್ಲಿ ರಾಮನವಮಿಯಂದು ಹಿಂದೂಗಳು ಇಂದೂ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಅಯೋಧ್ಯೆ ನವಾಬರ ಕೈ ಸೇರಿದಾಗ ಮತ್ತೆ ಹಿಂದೂ ಹೋರಾಟ. ಹನುಮಾನ್ ಗಢಿಯಲ್ಲಿ. ಮುಂದೆಯೂ ಸತತ ಹೋರಾಟದ ಫಲ, ಮುಸ್ಲಿಂರು ಅಯೋಧ್ಯೆ ಬಿಟ್ಟು ಹೋದರು. ಗುಮ್ಮಟ ಉಳಿಯಿತು. 1934ರಲ್ಲಿ ಗುಮ್ಮಟ ಕೆಡವುವ ಪ್ರಯತ್ನ ನಡೆಯಿತು. ಬ್ರಿಟಿಷರು ಅದನ್ನು ದುರಸ್ತಿ ಮಾಡಿದರು! 1992 ಡಿಸೆಂಬರ್ 6ರಂದು ನಡೆದುದು ನಿಮಗೆ ಗೊತ್ತು.

    ಈವರೆಗೆ 77 ಯುದ್ಧಗಳು ನಡೆದಿವೆ. ಸುಪ್ರೀಂ ಕೋರ್ಟ್ ತೀರ್ಪು ಈಗ ತೆರೆ ಎಳೆದ ಮೇಲೆ ಕಾಂಗ್ರೆಸ್ಸು ತಕರಾರು? ಭಯ ಎಂದೆನಲ್ಲ? ಬಾಬ್ರಿ ಉರುಳಿದಾಗ ನರಸಿಂಹ ರಾಯರು ‘1947ರಿಂದ ಈಚೆಗೆ ಯಥಾಸ್ಥಿತಿ ಕಾಯಬೇಕು’ ಅಂತ ಒಂದು ಮಸೂದೆ ತಂದರು. ಅದು ಕಾಶಿಗೆ, ಮಥುರಾಕ್ಕೆ ಅಡ್ಡವಾಗಿದ್ದು, ಈಗ ಮೋದಿ, ಸಂಸತ್ತಿನ ಉಭಯ ಸದನದಲ್ಲಿ ಅದನ್ನು ರದ್ದುಮಾಡಿದರೆ, ಈ ಎರಡು ಮಾತ್ರವಲ್ಲ-ಇನ್ನೂ ಹಲವಾರು-ಗುಜರಾತಿನ ಮಾತೃಗಯಾ, ಭೋಜರಾಜನ ಧಾರಾಪುರೀ-‘ಧಾರ್’ ಇನ್ನಿತರ ಕಡೆಗಳಲ್ಲೂ ಆಕ್ರಮಿತ ಪ್ರದೇಶಗಳು ಹಿಂದೂಗಳ ಪಾಲಾಗುತ್ತವೆ.

    ‘ಸುಪ್ರೀಂ ತೀರ್ಪ’-ಶತ್ರುಗಳಿಗೆ ಮರಣಶಾಸನ ಆಯಿತಲ್ಲ? ಕರ್ನಾಟಕದ ಮುಜರಾಯಿ ದೇವಾಲಯಗಳು, ಸೆಕ್ಯುಲರರ ಕೈ ಬಿಟ್ಟು, ಹಿಂದೂ ಸಂಸ್ಥೆಗಳ ಪಾಲಾಗುತ್ತವೆ. ಏಕೆಂದರೆ, ತಿರುವನಂತಪುರದ ಅನಂತ ಪದ್ಮನಾಭ ದೇವಾಲಯದಂಥ ತೀರ್ಪ ಇದೆಯಲ್ಲ? ಅಂದರೆ? ಪೊಳ್ಳು ಸೆಕ್ಯುಲರಿಸಂನ ಸಾವು! ಅಂದರೆ ಕಾಂಗ್ರೆಸ್ ಸಾವು, ಕಾಮ್ರೇಡ್ ಸಾವು! ಈಗಲಿಂದ ಅಳಲು ಪ್ರಾರಂಭ. ಅತ್ತೂ ಅತ್ತೂ ಸಾಧಿಸುವುದೇನಿಲ್ಲ! ಶ್ರೀರಾಮ ಎದ್ದಿದ್ದಾನೆ. ನೂರು ಸಾವಿರ ರಾವಣರೂ ಈಗ ಸಾಯಲೇಬೇಕು. ಮಾರೀಚನ ಗತಿ? ಶೂರ್ಪಣಖೆ? ಇಟಲಿಯತ್ತ? ಹೌದೆ?

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts