More

    ತಂಗಡಗಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮೋದಿ ಹೆಸರು ಹೇಳಿದವರ ಕಪಾಳಕ್ಕೆ ಬಾರಿಸಿ ಎಂದಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ ಆಗ್ರಹಿಸಿದರು.

    ಕಾಂಗ್ರೆಸ್‌ನವರಿಗೆ ಸಂಸ್ಕೃತಿಯೇ ಇಲ್ಲ ಎಂಬುದಕ್ಕೆ ಸಚಿವ ಶಿವರಾಜ್ ತಂಗಡಗಿ ಸಾಕ್ಷಿಯಾಗಿದ್ದು, ಮೋದಿ ಬಗ್ಗೆ ಟೀಕೆ ಮಾಡಿರುವ ಸಚಿವ ತಂಗಡಗಿ ತಕ್ಷಣವೇ ಕ್ಷಮೆಯಾಚಿಸಬೇಕು ಅಥವಾ ಅವರ ಖಾತೆಯನ್ನು ಬದಲಾವಣೆ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕೊಪ್ಪಳದಲ್ಲಿ ಮೋದಿ ಹೆಸರು ಹೇಳಿದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿರುವ ಸಚಿವ ತಂಗಡಗಿ ಅವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅವರ ಹೇಳಿಕೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಸಮರ್ಥಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಇದು ಮೊದಲೇನಲ್ಲ, ಹಿಂದೊಮ್ಮೆ ಮೋದಿ ಅವರನ್ನು ಎಐಸಿಸಿ ನಾಯಕ ರಾಹುಲ್ ಗಾಂಧಿ ಸಾವಿನ ವ್ಯಾಪಾರಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಕಂಠ ಎಂದಿದ್ದರು. ಸಿಎಂ ಸಿದ್ದರಾಮಯ್ಯ ಪ್ರತಿ ಬಾರಿಯೂ ಏಕವಚನ ಪದ ಬಳಕೆ ಮಾಡುತ್ತಾರೆ. ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ಚೋರ್ ಎನ್ನುವ ಪದ ಬಳಕೆ ಮಾಡಿದ್ದು, ಇದು ಕಾಂಗ್ರೆಸ್ ಸಂಸ್ಕೃತಿ ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದರು.
    ಮೋದಿಯಿಂದ ಇಡೀ ದೇಶದಲ್ಲಿ ಅಭಿವೃದ್ಧಿ ರೂಪಾಂತರ ಆಗಿದೆ. 2014ಕ್ಕಿಂತ ಮುನ್ನ 350 ಸ್ಟಾರ್ಟಪ್‌ಗಳಿದ್ದವು. ಈಗ 1.17 ಲಕ್ಷಕ್ಕೆ ಏರಿಕೆಯಾಗಿವೆ. ಇದು ಮೋದಿಯಿಂದ ಮಾತ್ರ ಸಾಧ್ಯವಾಗಿದೆ. ಒಂದು ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಯುವಕರಿಗೆ ಕೌಶಲ ತರಬೇತಿ ನೀಡಲಾಗಿದೆ. ಯುವಕರ ಬೆನ್ನೆಲುಬು ಆಗಿ ಮೋದಿ ನಿಂತಿದ್ದು, ಮೋದಿ ಬಗ್ಗೆ ಜನರಿಗೆ ಅಪಾರ ನಂಬಿಕೆ ಇದೆ. ಈ ಬಾರಿಯೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಪ್ರಮುಖರಾದ ಚಂದ್ರಶೇಖರ್, ಹೃಷಿಕೇಶ್ ಪೈ, ಕೆ.ವಿ.ಅಣ್ಣಪ್ಪ, ವಿನ್ಸಂಟ್ ರೋಡ್ರಿಗಸ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts