ಮದ್ದೂರು: ಧರ್ಮ ದೀಕ್ಷಾ ದಿನ ಅಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ರಾಷ್ಟ್ರೀಯ ಮಹಾನಾಯಕ ಜನಸೇವಾ ಚಾರಿಟಬಲ್ ಟ್ರಸ್ಟ್, ದಲಿತ ಪರ ಸಂಘಟನೆಗಳ ಸಮನ್ವಯ ಸಮಿತಿ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.
ದಲಿತ ಮುಖಂಡ ಆತಗೂರು ನಿಂಗಪ್ಪ ಮಾತನಾಡಿ, ಅಂಬೇಡ್ಕರ್ ಲಕ್ಷಾಂತರ ಅನುಯಾಯಿಗಳೊಂದಿಗೆ 1956 ರ ಅ.14 ರಂದು ನಾಗ್ಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಇದು ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿದೆ ಎಂದು ತಿಳಿಸಿದರು.
ದೇಶದಲ್ಲಿರುವ ಶೋಷಿತ ಸಮಾಜ ಶತಶತಮಾಗನಳಿಂದಲೂ ಧಾರ್ಮಿಕ ಅಸಮಾನತೆ ಮತ್ತು ಅಸಹಿಷ್ಣುದಿಂದ ಬಳಲುತ್ತಿದೆ. ಇದಕ್ಕೆ ಅಂತ್ಯವಾಡಿ ಸಮಾನತೆ, ಸಹೋದರತೆ ಮತ್ತು ಸಹ ಬಾಳ್ವೆಗಾಗಿ ಭಾರತದಲ್ಲಿ ಬೌದ್ಧ ಧರ್ಮವನ್ನು ಪುನರುಜ್ಜೀವನಗೊಳಿಸಲು ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ಪಡೆದರು ಎಂದರು.
ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಮುಖಂಡರಾದ ವೆಂಕಟಚಲಯ್ಯ, ಪೊಲೀಸ್ ಮಹದೇವು, ಬಸವರಾಜು, ಶಶಿಕುಮಾರ್, ಪ್ರಭುಸ್ವಾಮಿ, ನಾಗರಾಜು, ರಾಮಲಿಂಗ, ಭಾನುಪ್ರಕಾಶ್, ನಳಿನಾ, ಇನಾಯತ್ವುಲ್ಲಾ ಖಾನ್, ರಾಜಕುಮಾರ್, ಚಂದ್ರಶೇಖರ್, ಮಲ್ಲಿಕ್, ಮರಿದೇವರು ಇತರರು ಇದ್ದರು.