ಎನ್.ಆರ್.ಪುರ: ಒಗ್ಗಟ್ಟಿನಲ್ಲಿ ಬಲವಿದ್ದು ಸಂಘಟನೆಯಿಂದ ಶಕ್ತಿ ಬರಲಿದೆ ಎಂದು ಕೊಪ್ಪ ತಾಲೂಕು ಕಸಾಪ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ ಹೇಳಿದರು.
ಸೋಮವಾರ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೆಟ್ಟಿಕೊಪ್ಪ ವಲಯದ ಮುತ್ತಿನಕೊಪ್ಪ, ಬಿ.ಕುಸುಬೂರು, ಮಡಬೂರು, ಕೆ.ಕಣಬೂರು ಒಕ್ಕೂಟಗಳ ಸಾಧನಾ ಸಮಾವೇಶದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾವು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಏಕಾಗ್ರತೆಯಿಂದ ಛಲ ಬಿಡದೆ ಹೋರಾಡಬೇಕು. ಹಲವು ಕುಟುಂಬಗಳಿಗೆ ಬೆಳಕು ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂವಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಡೆ ಅವರನ್ನು ಸ್ಮರಿಸಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ನಾಲ್ಕು ಗೋಡೆಗಳ ಒಳಗಿನಿಂದ ಹೊರಗೆ ಬಂದು ಆರ್ಥಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಪ್ರತಿಯೊಬ್ಬ ಮಹಿಳೆಯರು ಬ್ಯಾಂಕ್ ವ್ಯವಹಾರ ಸೇರಿದಂತೆ ಹಣಕಾಸು ವ್ಯವಹಾರ ತಿಳಿದಿಕೊಂಡಿರಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕು. ಯೋಜನೆಯ ಶ್ರಮ ವಿನಿಮಯ ಪದ್ದತಿ ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
10 ಉತ್ತಮ ಸಂಘಗಳಿಗೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮುತ್ತಿನಕೊಪ್ಪ ಒಕ್ಕೂಟದ ಅಧ್ಯಕ್ಷ ಎನ್.ಆರ್.ಸತೀಶ್, ಗ್ರಾಪಂ ಅಧ್ಯಕ್ಷೆ ನೀಲಮ್ಮ, ವಿವಿಧ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ, ಭವಾನಿ, ಪುಟ್ಟಸ್ವಾಮಿ, ಸುಮಾ, ಶೆಟ್ಟಿಕೊಪ್ಪ ವಲಯ ಮೇಲ್ವೀಚಾರಕ ಸತೀಶ್, ಸೇವಾ ಪ್ರತಿನಿಧಿಗಳಾದ ದೀಪಾ, ಅಕ್ಷತಾ, ಶಿಲ್ಪಾ, ಪಲ್ಲವಿ, ಸುಮಾ, ವಿ.ಎಲ್.ವಿ ತಂಡದ ಪ್ರಿಯಾ, ಅಕ್ಷತಾ ವಿಪತ್ತು ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.