ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಬಿಜೆಪಿ ಶಾಸಕರು ಮತ್ತು ಸಂಸದರ ಬೆಂಬಲ ಪಡೆಯುವ ಸಲುವಾಗಿ ಇಂದು ಕರ್ನಾಟಕಕಕ್ಕೆ ಆಗಮಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೂ ಭೇಟಿಯಾದರು.
ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ದ್ರೌಪದಿ ಮುರ್ಮು ಅವರು ಭೇಟಿಯಾಗಿದ್ದು, ಅಲ್ಲಿ ದೇವೇಗೌಡರ ಬೆಂಬಲಕ್ಕಾಗಿ ಮನವಿ ಮಾಡಿಕೊಂಡರು. ಬೆಂಗಳೂರಿನ ಖಾಸಗಿ ಹೋಟೆಲ್ನಿಂದ ಹೊರಟ ದ್ರೌಪದಿ ಮುರ್ಮು ಅವರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ದೇವೇಗೌಡರ ಮನೆಗೆ ಭೇಟಿ ಕೊಟ್ಟಿದ್ದರು.
ಈ ಭೇಟಿ ಸಂದರ್ಭ ದೇವೇಗೌಡರ ಜತೆ ಅವರ ಪುತ್ರರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಕೂಡ ಉಪಸ್ಥಿತರಿದ್ದು, ಮಾತುಕತೆ ನಡೆಸಿದರು. ದೇವೇಗೌಡ ಕುಟುಂಬಸ್ಥರು ಈ ವೇಳೆ ದ್ರೌಪದಿ ಮುರ್ಮು ಅವರಿಗೆ ವಿಶೇಷ ಸತ್ಕಾರಗಳೊಂದಿಗೆ ಉಪಚರಿಸಿದರು. ಬಳಿಕ ದೇವೇಗೌಡರ ಪತ್ನಿ ಚನ್ನಮ್ಮ ಮನೆಯ ಗೇಟ್ವರೆಗೂ ಬಂದು ದ್ರೌಪದಿ ಅವರನ್ನು ಬೀಳ್ಕೊಟ್ಟರು.
ಬೆಂಬಲದ ಕುರಿತು ಹೀಗೆಂದರು…
ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಇಂದು ದೇವೆಗೌಡರ ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಬೆಂಬಲದ ಕುರಿತು ಯಾ ನಿರ್ಧಾರ ತಳೆಯಲಾಯಿತು ಎಂಬ ಕುರಿತು ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಈ ಮಾಹಿತಿಯನ್ನು ನೀಡಿದ್ದಾರೆ.
ಈಗಾಗಲೇ ಎಚ್.ಡಿ. ಕುಮಾರಸ್ವಾಮಿಯವರು ಹೇಳಿರುವಂತೆ ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದ್ದು ಅವರಿಗೆ ಬೆಂಬಲ ನೀಡುವುದು ನಮಗೆ ಸರಿ ಅನಿಸಿದೆ. ಅದಾಗ್ಯೂ ಶಾಸಕಾಂಗ ಪಕ್ಷದ ಸಭೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ದೇವೇಗೌಡರು ತಿಳಿಸಿದ್ದಾರೆ. ಶೀಘ್ರದಲ್ಲೇ ಸಭೆ ಕರೆದು ತೀರ್ಮಾನಿಸುತ್ತೇವೆ. ಬಹುತೇಕ ಅವರಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಧಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಗಲಿದೆ ಎಂದು ಅವರು ತಿಳಿಸಿದರು.
ಫುಡ್ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!