ದೇವದುರ್ಗ: ಮುಂಬೈ ಸೇರಿ ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವ ಕಾರಣ ಆಲಮಟ್ಟಿ ಹಾಗೂ ನಾರಾಯಣಪುರದ ಬಸವ ಸಾಗರ ಜಲಾಶಯದಲ್ಲಿ ಭಾರಿ ಪ್ರಮಾಣದ ಒಳಹರಿವಿದೆ. ಇದರಿಂದ ಮುಂಜಾಗ್ರತೆ ಕ್ರಮವಾಗಿ 2.88ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗಿದೆ.
ನದಿದಂಡೆ ಗ್ರಾಮದ 20ಕ್ಕೂ ಹೆಚ್ಚು ಹಳ್ಳಿಗಳ ರೈತರ ಜಮೀನಿಗೆ ನೀರು ನುಗ್ಗಿವೆ. ನದಿಯ ಹರಿವು ತಗ್ಗದ ಕಾರಣ ಜಮೀನಿನ ಬೆಳೆಗಳ ನಡುವೆ ನೀರು ನಿಂತಿದ್ದು, ಬೆಳೆ ಸಂಪೂರ್ಣ ಹಾಳಾಗುತ್ತಿವೆ. ಶನಿವಾರ 4ಲಕ್ಷ ಕ್ಯೂಸೆಕ್ ನೀರು ಹರಿದಿದ್ದು, ಭಾನುವಾರ ಹಾಗೂ ಸೋಮವಾರ 2.88 ಲಕ್ಷ ಕ್ಯೂಸೆಕ್ ನೀರು ಹರಿದಿದೆ.
ತಾಲೂಕಿನ ವೀರಗೋಟ, ಲಿಂಗದಹಳ್ಳಿ, ಬಾಗೂರು, ಹೇರುಂಡಿ, ನೀಲವಂಜಿ, ಗೋಪಳಾಪುರ, ಹೂವಿನಹೆಡಗಿ, ಜೋಳದಹೆಡಗಿ, ಅಂಜಳ, ಹಿರೇರಾಯಕುಂಪಿ, ಚಿಕ್ಕರಾಯಕುಂಪಿ, ಕರ್ಕಿಹಳ್ಳಿ, ಪರ್ತಾಪುರ, ಗೂಗಲ್, ಗಾಗಲ್, ಬಸವಂತಪುರ ಸೇರಿ 57ಕಿಮೀ ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ನದಿ ನೀರು ನುಗ್ಗಿವೆ. ಅಧಿಕೃತ ಹಾಗೂ ಅನಧಿಕೃತ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ಜಮೀನು ಬೆಳೆ ನಷ್ಟ ಅನುಭವಿಸಿವೆ.
ಎರಡ್ಮೂರು ದಿನಗಳ ಕಾಲ ಜಮೀನಿನಲ್ಲಿ ನೀರು ನಿಲ್ಲುವುದರಿಂದ ಹತ್ತಿ, ಮೆಣಸಿನಕಾಯಿ, ತೊಗರಿ, ಭತ್ತ ನೀರಿಗೆ ಕೊಚ್ಚಿಹೋಗಿದ್ದರೆ, ಕೆಲ ಬೆಳೆ ನೀರು ನಿಂತು ಕೊಳೆಯುತ್ತಿವೆ. ಇದರಿಂದ ಭಾರಿ ನಷ್ಟವಾಗಲಿದೆ. ಬೆಳೆ ಕೊಳೆಯುವ ಜತೆಗೆ ಭೂಮಿಯ ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ.
ಇನ್ನು ಹೂವಿನಹೆಡಗಿ ಸೇತುವೆ ಹಾಗೂ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮೂರನೆ ದಿನವೂ ಸಂಪೂರ್ಣ ಮುಳುಗಡೆಯಾಗಿದೆ. ವೀರಗೋಟದ ಶ್ರೀಆದಿಮೌನಲಿಂಗೇಶ್ವರ ಸಂಪರ್ಕ ರಸ್ತೆ ಮುಳುಗಿದ್ದು, ಕೊಪ್ಪರದ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನ ಸುತ್ತ ನಿಂತಿದ್ದರೆ, ಗೂಗಲ್ನ ಶ್ರೀಅಲ್ಲಮಪ್ರ ದೇವಸ್ಥಾನ ಸಮೀಪದ ನೀರು ಬಂದಿವೆ. ಮಂಗಳವಾರ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.