ದೇವದುರ್ಗ: ಬಾಬಾ ಸಾಹೇಬರು ಯುವಜನರ ಪ್ರೇರಣಾಶಕ್ತಿಯಾಗಿದ್ದಾರೆ ಎಂದು ಉಪನ್ಯಾಸಕ ಕೆ.ವಿನೋದ್ಕುಮಾರ ನಾಯಕ ಹೇಳಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಮಲದಕಲ್ ಗೆಳೆಯರ ಬಳಗ ಮತ್ತು ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಭಾರತ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತಾದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಕಡೆ ಹೆಚ್ಚಿನ ಗಮನ ನೀಡುವ ದೃಷ್ಟಿಯಿಂದ ನಿರಂತರ ಪರಿಶ್ರಮ ಅಗತ್ಯ ಎಂದರು.
ಜ್ಞಾನಾರ್ಜನೆಗೆ ಯಾವುದೇ ಅಡೆತಡೆಗಲಿಲ್ಲ. ಬಡತನ, ಸಿರಿತನ, ಗ್ರಾಮೀಣ ನಗರ ಎನ್ನುವ ಭೇದಭಾವ ವಿದ್ಯೆಗೆ ಇಲ್ಲ. ಸಾಧನೆ ಎನ್ನುವುದು ಸಾಧಕನ ಸೊತ್ತು ಹೊರತು ಸೋಮಾರಿಗಳ ಸೊತ್ತಲ್ಲ. ಯುವಕರು ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾ.ಮಾರುತಿ ಕುಮಾರ ಮಲದಕಲ್, ಪಿಡಿಒ ಶರಣು ಪಾಟೀಲ್ ಹೇರೂರು, ವಾರ್ಡನ್ ನಾಗರಾಜ ಹೇರೂರು, ಗ್ರಂಥಾಲಯದ ಅಧಿಕಾರಿಗಳಾದ ನವಾಬ್ ಪಟೇಲ್, ಹನುಮಂತ ನಾಯಕ ಅಂಚೆಸೂಗೂರು, ಬುಡ್ಡಯ್ಯ ನಾಯಕ ಗಲಗ, ವಿಜಯ್ ಕುಮಾರ್ ಮಸಿಹಾಳ, ನಿಂಗಪ್ಪ ಚಿಂತಲಕುಂಟಾ, ಮರಿಯಪ್ಪ ಇತರರಿದ್ದರು. ಸ್ಪರ್ಧೆಯಲ್ಲಿ ವಿಜೇತ ಯುವಕ ಹುಸೇನ್ಪಾಷಾ ತಿಪ್ಪಲದಿನ್ನಿಗೆ ಬಹುಮಾನ ನೀಡಲಾಯಿತು.