ದೇವದುರ್ಗ: ತಾಲೂಕಿನ ಗಬ್ಬೂರು ಹೋಬಳಿಯ ಖಾನಾಪುರ ಗ್ರಾಮಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಹೇಮನಾಳ ಗ್ರಾಪಂ ನರೇಗಾ ಮ್ಯಾನೇಜರ್ ಮಧುರಾಜ್ಗೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಹೇಮನಾಳ ಗ್ರಾಪಂ ವ್ಯಾಪ್ತಿಯ ಖಾನಾಪುರ ಗ್ರಾಮದ ದಲಿತ ಕಾಲನಿಯಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ. ಶುದ್ಧ ಕುಡಿವ ನೀರು, ಶೌಚಗೃಹ, ಚರಂಡಿ ಹಾಗೂ ಸಿಸಿ ರಸ್ತೆ ಸಮಸ್ಯೆಯಿದೆ. ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳ ಹಾವಳಿ ಹೆಚ್ಚಾಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪಿಡಿಒ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ನರೇಗಾ ಯೋಜನೆಯಡಿ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಖಾನಾಪುರ ಗ್ರಾಮದ ದಲಿತ ಕಾಲನಿಗೆ ಸಮರ್ಪಕ ಶುದ್ಧ ಕುಡಿವ ನೀರು ಒದಗಿಸಬೇಕು. ಎಲ್ಲ ಕಡೆ ಸಿಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಿಸಬೇಕು. ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಮಹಿಳೆಯರಿಗೆ ಶೌಚಗೃಹ ನಿರ್ಮಿಸಬೇಕು. ನರೇಗಾ ಯೋಜನೆ ಸಮರ್ಪಕ ಜಾರಿಗೊಳಿಸಿ ಕೂಲಿಕಾರರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಕಾರ್ಯದರ್ಶಿ ಮೌನೇಶ ಜಾಲಹಳ್ಳಿ, ಮುಖಂಡರಾದ ನಾಗಪ್ಪ, ಶಬ್ಬೀರ್ ಜಾಲಹಳ್ಳಿ, ದುರುಗಪ್ಪ ಹೊರಟ್ಟಿ, ಮಲ್ಲಮ್ಮ, ಮಾರೆಮ್ಮ, ಗೋದಾವರಿ ಇತರರಿದ್ದರು.