ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್ನ ಶ್ರೀ ಕನಗುರುಪೀಠ ಮಹಾಸಂಸ್ಥಾನದಲ್ಲಿ 2021ರ ಜ.12, 13, 14ರಂದು ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ-2021 ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.
ಶ್ರೀಮಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಶನಿವಾರ ಮಾತನಾಡಿದರು. ಕುರುಬ ಸಮುದಾಯದ ಜಾಗೃತಿ ಹಾಗೂ ಸಂಸ್ಕೃತಿ ಉಳಿಸಲು ಕಾರ್ಯಕ್ರಮ ನಡೆಸಲಾಗುತ್ತಿದೆ. ಸಮಾವೇಶದ ಜತೆಗೆ ಸಮಾಜದಲ್ಲಿ ಹಿಂದುಳಿದ ಜಾತಿಗಳ ಸಮಾವೇಶ ನಡೆಸಿ ಅವರಿಗೂ ಅಕ್ಷರ ಜಾಗೃತಿ ಮೂಡಿಸಲಾಗುವುದು.
ಈ ಸಮಾವೇಶದಲ್ಲಿ ಪೂಜಾರಿಗಳು, ಹೆಳವರು, ವಗೈಯರ್, ಸುಡುಗಾಡು ಸಿದ್ಧರು, ಟಗರು ಜೋಗಿಗಳ ಸಮುದಾಯಗಳ ಸಮಾವೇಶ ನಡೆಸಲಾಗುವುದು. 108 ಡೊಳ್ಳು, 108 ನಾಮಾವಳಿ ದೇವರಗಳ ಆಗಮನ ಕಾರ್ಯಕ್ರಮ ನಡೆಸಲಾಗುವುದು. ವಿವಿಧ ಸಮಾವೇಶಗಳ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕುರುಬ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಯರ್ರೆಗೌಡ ಬಳ್ಳಾರಿ, ಬಸವಂತಪ್ಪ ರಾಯಚೂರು, ವಿಶ್ವನಾಥ ಯಾದಗಿರಿ, ಅಮೃತರಾವ್ ಬೀದರ್, ಡಿ.ಬಿ.ಸಿದ್ದಾಪುರ, ಮಹಾಂತೇಶ ಕೌಲ್ಗಿ, ಕೆ.ಎಂ.ಮಲ್ಲಪ್ಪ, ಈರಣ್ಣ ಇತರರಿದ್ದರು.