ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ನಿವೇಶನಗಳ ಹಂಚಿಕೆಯಲ್ಲಿ ನಿಯಮಾವಳಿಗಳನ್ನು ಅನುಸರಿಸಿಲ್ಲ. ಕಾನೂನುಬಾಹಿರವಾಗಿ ನಡೆದ ಹಂಚಿಕೆ ಪ್ರಕ್ರಿಯೆ ರದ್ದುಪಡಿಸಿ ಸರ್ಕಾರ ಸೂಕ್ತ ತನಿಖೆ ನಡೆಸಬೇಕೆಂದು ಎಪಿಎಂಸಿ ಸದಸ್ಯ ಶಂಕ್ರಪ್ಪ ಬಿಜವಾಡ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರೊಬ್ಬರು ಸೇರಿಕೊಂಡು ತಮಗೆ ಬೇಕಾದ ವಿಷಯಗಳ ಠರಾವ್ ಪ್ರತಿಯನ್ನು ಮಾತ್ರ ತೆಗೆದುಕೊಂಡು ಹೋಗಿ ಕೃಷಿ ಮಾರಾಟ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಿ ಅನುಮತಿ ಪಡೆದುಕೊಂಡಿದ್ದಾರೆ. ಈ ಮೂಲಕ ನಿಯಮಾವಳಿ ಉಲ್ಲಂಘಿಸಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಟೆಂಡರ್ ಕಂ ಬಹಿರಂಗ ಹರಾಜು: ಈಗಾಗಲೇ ಮೂಲೆ ನಿವೇಶನ ಬಹಿರಂಗ ಹರಾಜು ಮಾಡಿದ್ದನ್ನು ಕೈಬಿಟ್ಟು ಕರ್ನಾಟಕ ಸರ್ಕಾರದ ಸುತ್ತೋಲೆಯಂತೆ ಆಸ್ತಿ ಹಂಚಿಕೆ ನಿಯಮಾವಳಿ ಪ್ರಕಾರ ಟೆಂಡರ್ ಕಂ- ಬಹಿರಂಗ ಹರಾಜು ಮಾಡಬೇಕು. ಇದರಿಂದ ಎಪಿಎಂಸಿಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ಹೇಳಿದ್ದೆ. ಆದರೆ, ಹಾಗೆ ಮಾಡದೇ ಕೇವಲ ಬಹಿರಂಗ ಹರಾಜು ಮಾಡಿದ್ದಾರೆ ಎಂದು ಶಂಕ್ರಪ್ಪ ಅವರು ದಾಖಲೆಗಳನ್ನು ಬಹಿರಂಗ ಪಡಿಸಿದರು.
ಮೂಲೆ ನಿವೇಶನ ಹಾಗೂ ಸಾಮಾನ್ಯ ನಿವೇಶನಗಳನ್ನು ಏಕಕಾಲದಲ್ಲಿ ಹಂಚಿಕೆ ಮಾಡಬಾರದು ಎಂಬ ನಿಯಮ ಇದೆ. ಇದನ್ನು ಕೂಡ ಪಾಲಿಸಿಲ್ಲ. ಹಂಚಿಕೆ ಪಾರದರ್ಶಕವಾಗಿಲ್ಲ ಎಂದು ದೂರಿದರು.
28ರಿಂದ ಉಪವಾಸ: ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು. ಸೂಕ್ತ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದರೆ ಫೆಬ್ರವರಿ 28ರಿಂದ ಮೂರು ದಿನಗಳ ವರೆಗೆ ಎಪಿಎಂಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಶಂಕ್ರಪ್ಪ ಬಿಜವಾಡ ಹೇಳಿದರು. ಬರುವ ಮಾರ್ಚ್ನಲ್ಲಿ ಎಪಿಎಂಸಿ ಆಡಳಿತ ಮಂಡಳಿಯ ಅಧಿಕಾರವಧಿಯು ಮುಗಿಯುತ್ತಿದೆ. ಇಂತಹ ಸಂದರ್ಭದಲ್ಲಿ ಎಪಿಎಂಸಿಗೆ ಕೆಟ್ಟ ಹೆಸರು ತರುವ ರೀತಿಯಲ್ಲಿ ತರಾತುರಿಯಲ್ಲಿ ನಿವೇಶನ ಹಂಚುವುದು ಸರಿಯಲ್ಲ. ಇದರ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ. ಕಾನೂನು ಹೋರಾಟಕ್ಕೂ ಇಳಿದಿದ್ದೇನೆ ಎಂದು ಅವರು ಹೇಳಿದರು.