ಮೂಡಲಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಮೂಡಲಗಿ ತಾಲೂಕು ಸಮಿತಿ ಕಾರ್ಯಕರ್ತರು ತಾಪಂ ಹಾಗೂ ತಹಸೀಲ್ದಾರ್, ಸಿಡಿಪಿಒ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ನೀಡಿದ ಅಖಿಲ ಭಾರತ ಮುಷ್ಕರ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ, ರಾಜ್ಯ ಗ್ರಾಪಂ ನೌಕರರು, ಅಕ್ಷರದಾಸೋಹ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪಾಯಕಾರಿ ಕೃಷಿ ಮಸೂದೆ ಹಾಗೂ ಕಾರ್ಮಿಕರ ವಿರೋಧಿ ನೀತಿ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಯಿಂದ ಕಾರ್ಮಿಕರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ 7500 ರೂ. ನೀಡಬೇಕು, ತಿಂಗಳಿಗೆ 10 ಕೆಜಿ ಉಚಿತ ಪಡಿತರ, ಗ್ರಾಮೀಣ ಪ್ರದೇಶದಲ್ಲಿ 200 ದಿನಗಳ ಉದ್ಯೋಗ ಖಾತ್ರಿ ಕೆಲಸ, ಅಸಂಘಟಿತ ವಲಯದ ಕಾರ್ಮಿಕರಿಗೆ 21 ಸಾವಿರ ರೂ.ಕನಿಷ್ಠ ವೇತನ ನಿಗದಿ ಮಾಡಬೇಕು. ಜಾರಿಗೆ ತಂದಿರುವ ಎಲ್ಲ ರೈತ ಹಾಗೂ ಕಾರ್ಮಿಕರ ವಿರೋಧಿ ಕಾಯ್ದೆ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು. ರಮೇಶ ಹೊಳಿ,ರಾಜು ದೊಡಮನಿ, ಬಸಪ್ಪ ರೋಡ್ಡಣ್ಣವರ, ವಿಠ್ಠಲ ಕಂಬಳೆ, ಮಹಾಂತೇಶ ಸಂತಿ, ರೇವಪ್ಪ ಬಿಳ್ಳೂರ, ಮಹಾದೇವ ಮಾದರ, ಶ್ರೀಕಾಂತ ಭಜಂತ್ರಿ, ಗುಲಾಬ ಪಿರಜಾದೆ, ಕಿಶೋರ ಗಣಾಚಾರಿ, ಹನುಮಂತ ಮೂಲಿಮನಿ, ಗೂಳಪ್ಪ ಹೊಸೂರ, ಸಿದ್ರಾಮ ಬಡಕುರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.