ಚಿಕ್ಕಮಗಳೂರು: ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾಗಿರುವ ಮನೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಡಿಎಸ್ಎಸ್ ಪದಾಧಿಕಾರಿಗಳು ಗುರುವಾಗ ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಕಳಸ ತಾಲೂಕಿನ ಹೊರನಾಡು ಸಮೀಪ ಎಳಕುಂಬರಿ ಗ್ರಾಮದ ವೈ.ಆರ್.ಶಿವಕುಮಾರ್ ಎಂಬುವವರಿಗೆ ಸೇರಿದ ವಾಸದ ಮನೆ ೨೦೧೯ರ ಸಾಲಿನಲ್ಲಿ ಸುರಿದ ಭಾರಿ ಮಳೆಗೆ ಮನೆ ತೀವ್ರ ಹಾನಿಗೊಂಡು ಬಿರುಕು ಬಿಟ್ಟಿಕೊಂಡಿದೆ ಎಂದು ತಿಳಿಸಿದರು.
ವಾಸದ ಮನೆಯ ಹಿಂಭಾಗ ೩೦ ಗುಂಟೆಯಲ್ಲಿ ಅಡಕೆ, ಏಲಕ್ಕಿ, ಕಾಫಿ, ಮೆಣಸಿನ ತೋಟಕ್ಕೆ ನೀರು ನುಗ್ಗಿ ಸಂಪೂರ್ಣ ಬೆಳೆಹಾನಿಯಾಗಿದೆ. ಈ ಸಂಬAಧ ಕಂದಾಯ ಅಧಿಕಾರಿ, ಆರ್.ಐ. ಹಾಗೂ ವಿ.ಐ.ಗಳು ಮನೆ ಹಾನಿಯ ಬಗ್ಗೆ ವರದಿ ಮಾಡಿದ್ದರೂ ಗ್ರಾಪಂ ಪಿಡಿಓ ಇದುವರೆಗೂ ಭೇಟಿ ನೀಡಿರುವುದಿಲ್ಲ ಎಂದು ದೂರಿದರು.
ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಮನೆ ಹಾನಿಗೊಂಡ ಫಲಾನುಭವಿಗಳಿಗೆ ಪರಿಹಾರ ನೀಡಬೇಕೆಂದು ಆದೇಶವಿದ್ದರೂ ಯಾವುದೇ ಪರಿಹಾರ ನೀಡಿರುವುದಿಲ್ಲ. ಕೂಲಿಕಾರ್ಮಿಕ ಶಿವಕುಮಾರ್ಗೆ ವಾಸದ ಮನೆ, ತೋಟ ಬಿಟ್ಟರೇ ಯಾವುದೇ ರೀತಿಯ ಆಸ್ತಿಗಳಿಲ್ಲ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಕೂಲಿಕಾರ್ಮಿಕರಾಗಿ ಜೀವನ ನಡೆಸುತ್ತಿರುವ ಶಿವಕುಮಾರ್ಗೆ ಪರಿಹಾರ ವಿತರಿಸಲು ನಾಲ್ಕು ವರ್ಷಗಳು ಕಳೆದಿರುವ ಕಾರಣ ಕೂಡಲೇ ಪರಿಹಾರ ಒದಗಿಸಬೇಕು. ವಿಳಂಬ ನೀತಿ ಅನುಸರಿಸಿದರೆ ಡಿಎಸ್ಎಸ್ ನೇತೃತ್ವದಲ್ಲಿ ನೊಂದ ಫಲಾನುಭವಿಗಳೊಂದಿಗೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್ಎಸ್ ತಾಲೂಕು ಸಂಘಟನಾ ಸಂಚಾಲಕ ಮಂಜುನಾಥ್, ಮುಖಂಡರಾದ ಕುಮಾರ್, ಗಣೇಶ್ ಬೀರೂರು, ಸಂತ್ರಸ್ಥ ಶಿವಕುಮಾರ್ ಮತ್ತಿತರರಿದ್ದರು.