ಚಾಮರಾಜನಗರ :ವಕೀಲರ ಸಂರಕ್ಷಣಾ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕೊಳ್ಳೇಗಾಲದ ನ್ಯಾಯಾಲಯದ ಮುಂಭಾಗ ಸಮಾವೇಶಗೊಂಡ ವಕೀಲ ಸಂಘದ ಸದಸ್ಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ವೃತ್ತದ ಮಾರ್ಗವಾಗಿ ಕೋರ್ಟ್ ಆವರಣದಲ್ಲಿ ಜಮಾಯಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್. ಬಸವರಾಜು ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ಮಂಡಿಸಿರುವ ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಶೀಘ್ರದಲ್ಲೇ ಜಾರಿಗೊಳಿಸಬೇಕು. ಸರ್ಕಾರಿ ಕೆಲಸದಲ್ಲಿ ಸೆಕ್ಯೂರಿಟಿ ಕರ್ತವ್ಯ ನಿರ್ವಹಿಸುವ ನೌಕರನಿಗೂ ರಾಜ್ಯ ಸರ್ಕಾರದ ನೌಕರ ಎಂದು ಪರಿಗಣಿಸಲಾಗುತ್ತದೆ. ಆತನಿಗೆ ಐಪಿಸಿ 353 ಸೆಕ್ಷನ್ ಅಡಿಯಲ್ಲಿ ರಕ್ಷಣೆ ಇರುತ್ತದೆ. ಆತನ ಮೇಲೆ ಹಲ್ಲೆ ಇನ್ನಿತರ ಕೃತ್ಯಗಳು ನಡೆದರೆ ಇದು ಜಾಮೀನು ರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ, ಇದೀಗ ಸರ್ಕಾರ ಮಂಡಿಸಿರುವ ವಕೀಲರ ಸಂರಕ್ಷಣಾ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳಾಗಬೇಕಿದೆ. ಇದನ್ನು ತುರ್ತಾಗಿ ಮಾಡಿ ಜಾರಿಗೊಳಿಸಿದರೆ ವಕೀಲರ ದೌರ್ಜನ್ಯಗಳನ್ನು ನಿಯಂತ್ರಿಸಬಹುದು ಎಂದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಸೀಮಾ ತಹಸೀನ್ ಸುಲ್ತಾನ, ಕಾರ್ಯದರ್ಶಿ ಮೋಹನ್ ಕುಮಾರ್, ಖಜಾಂಚಿ ಸೀಗರಾಜು, ಹಿರಿಯ ವಕೀಲರು ಸಿ.ರವಿ, ಮಾದಪ್ಪ, ಎಸ್.ನಾಗರಾಜು, ವಿ. ಸೋಮಶೇಖರ್, ರವಿಕುಮಾರ್, ರಾಧಕೃಷ್ಣ, ರುದ್ರಾರಾಧ್ಯ, ಕೆಂಪರಾಜು, ಮಲ್ಲಿಕಾರ್ಜುನ, ನಟರಾಜು, ನಿರ್ಮಲಾ, ತನುಜಾ, ಮಂಜುಳಾ, ಹೇಮಾವತಿ, ವೇದಾ, ನಿಂಗರಾಜಮ್ಮ, ಅನುಪಮಾ, ಕಾವ್ಯ ಮತ್ತಿತರಿದ್ದರು.