ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿರುವ ಕಾಂಗ್ರೆಸ್ ಪಕ್ಷ ಸೋಲಿಗೆ ಕಾರಣ ಹುಡುಕುವ ಕೆಲಸಕ್ಕೆ ಕೈಹಾಕಿದೆ.
ದೆಹಲಿ ವಿಧಾನಸಭೆಯಲ್ಲಿ 2ನೇ ಬಾರಿಗೆ ಅತ್ಯಂತ ಹಳೇ ಪಕ್ಷವಾದ ಕಾಂಗ್ರೆಸ್ ಶೂನ್ಯ ಫಲಿತಾಂಶ ಪಡೆದಿರುವುದು ಪಕ್ಷಕ್ಕೆ ಮುಜುಗರ ತಂದಿದೆ. ಸೋಲಿಗೆ ಕಾರಣ ಹುಡುಕುವುದರ ಜತೆ ದೆಹಲಿ ಕಾಂಗ್ರೆಸ್ ಘಟಕದಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದೆ.
ಕಾಂಗ್ರೆಸ್ನ 67 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಶೀಲಾ ದೀಕ್ಷಿತ್ ನಂತರ ದೆಹಲಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರು ವಿಫಲವಾಗಿರುವುದು ಕೂಡ ಚರ್ಚೆಗೆ ಒಳಪಟ್ಟಿದೆ.
ದೆಹಲಿ ಉಸ್ತುವಾರಿ ವಹಿಸಿಕೊಂಡಿದ್ದ ಚಾಕೋ ಅವರಿಂದ ಪಕ್ಷಕ್ಕೆ ಸೋಲಾಯಿತು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ದೆಹಲಿಯಲ್ಲಿ ಪಕ್ಷದ ಸೋಲಿಗೆ ಏನು ಕಾರಣ ಎಂದು ಹುಡುಕಿ ತಳಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ, ಸೋಲಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ. ಸಿದ್ಧಾಂತ ಬಿಟ್ಟುಕೊಡದೆ ಪಕ್ಷವನ್ನು ಕಟ್ಟುತ್ತೇವೆ. ಕೆಲವೊಂದು ತ್ಯಾಗ ಮಾಡಿ ಪಕ್ಷ ಬಲಪಡಿಸುತ್ತೇವೆ ಎಂದು ರಣದೀಪ್ ಹೇಳಿದರು. (ಏಜೆನ್ಸೀಸ್)