ನವದೆಹಲಿ: ದೆಹಲಿ ಚುನಾವಣಾ ಫಲಿತಾಂಶದ ಅರ್ಧದವರೆಗೂ ಗೆಲವು ನಮ್ಮದೇ ಎಂದು ಹೇಳುತ್ತಿದ್ದ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಕೊನೆಗೂ ಸೋಲನ್ನು ಒಪ್ಪಿಕೊಂಡು, ಭರ್ಜರಿ ಬಹುಮತ ಸಾಧಿಸಿದ ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ತಮ್ಮ ಹಿಂದಿನ ಟ್ವೀಟ್ ಬಗೆಗಿನ ಪ್ರಶ್ನೆಯಿಂದ ಮುಜುಗರಕ್ಕೂ ಒಳಗಾದರು.
ದೆಹಲಿಯ ಎಲ್ಲ ಮತದಾರರಿಗೂ ಹಾಗೂ ಶ್ರಮವಹಿಸಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳು. ಜನರು ತೀರ್ಪನ್ನು ನಾವು ಗೌರವಿಸುತ್ತೇವೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದಗಳು. ಜನರ ನಿರೀಕ್ಷೆಗಳನ್ನು ದೆಹಲಿ ಸರ್ಕಾರ ಪೂರೈಸಲಿದೆ ಎಂದು ಬಯಸಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಮತದಾನ ದಿನ ಅಂದರೆ ಶನಿವಾರ ಟ್ವೀಟ್ ಮಾಡಿದ್ದ ತಿವಾರಿ, ಬಿಜೆಪಿ 48 ಸ್ಥಾನಗಳಲ್ಲಿ ಗೆಲ್ಲಲಿದೆ. ಈ ಮೂಲಕ ಸರ್ಕಾರವನ್ನು ರಚಿಸಲಿದೆ ಎಂದು ಹೇಳುವ ಮೂಲಕ ಬೇಕಾದರೆ ಟ್ವೀಟ್ ಅನ್ನು ಸೇವ್ ಮಾಡಿಕೊಳ್ಳಿ ಎಂದು ಬಲವಾದ ನಂಬಿಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿ 55 ಸ್ಥಾನಗಳನ್ನು ಗೆದ್ದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದ್ದರು.
ನಿಮ್ಮ ಟ್ವೀಟ್ ಅನ್ನು ಸೇವ್ ಮಾಡಿಕೊಂಡಿದ್ದೇವೆ. ತಾವೀಗ ಅದನ್ನು ಡಿಲೀಟ್ ಮಾಡಬಹುದಾ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಮುಜಗರಕ್ಕೀಡಾದ ತಿವಾರಿ, ರಾಜ್ಯದ ಮುಖ್ಯಸ್ಥನಾಗಿ ರಾಜ್ಯವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಬಹುದಾ? ನಾವು ನಮ್ಮ ಆಂತರಿಕ ಸಮೀಕ್ಷೆಯನ್ನು ಹೊಂದಿದ್ದೆವು. 48 ಕ್ಷೇತ್ರಗಳಲ್ಲಿ ಮೌಲ್ಯ ಮಾಪನ ಮಾಡಿದ್ದೆವು. ಯೋಚನೆ ಮಾಡಿದ್ದಲ್ಲಿ ಎಡವಿದೆವು. ಜನರು ಬದಲಾವಣೆಗಾಗಿ ವೋಟ್ ಮಾಡಿದ್ದಾರೆ. ನೀವು ನನ್ನ ಟ್ವೀಟ್ ಸೇವ್ ಮಾಡಿಕೊಂಡಿದ್ದರೆ, ಅದನ್ನು ಹಾಗೇ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಇನ್ನು ಚುನಾವಣಾ ಫಲಿತಾಂಶಕ್ಕೆ ಬರುವುದಾರೆ, ಸದ್ಯದ ಟ್ರೆಂಡ್ ಪ್ರಕಾರ ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 52 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಆಪ್ ಉಳಿದ 10 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ 6 ಸ್ಥಾನಗಳಲ್ಲಿ ವಿಜಯೋತ್ಸವ ಆಚರಿಸಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. (ಏಜೆನ್ಸೀಸ್)