ಹಗರಿಬೊಮ್ಮನಹಳ್ಳಿ: ಕೋವಿಡ್ 19ನಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ಎಸ್ಎಫ್ಐ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾ ಅಧ್ಯಕ್ಷ ದೊಡ್ಡ ಬಸವರಾಜ ಮಾತನಾಡಿ, ಕರೊನಾ ವೈರಸ್ ಈಗಾಗಲೇ ಸಮುದಾಯಕ್ಕೆ ಹರಡಿದ್ದು ನಿಯಂತ್ರಿಸುವುದು ಕಷ್ಟ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಹಿತದೃಷ್ಟಿಯಿಂದ ಸರ್ಕಾರ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪರೀಕ್ಷೆ ರದ್ದುಪಡಿಸಬೇಕು. ಸೆಮಿಸ್ಟರ್, ಪರೀಕ್ಷೆ, ಹಾಸ್ಟೆಲ್ ಸೇರಿ ಎಲ್ಲ ರೀತಿಯ ಶುಲ್ಕಗಳನ್ನು ಮನ್ನಾ ಮಾಡಬೇಕು. ಕೇರಳ ಮಾದರಿಯಲ್ಲಿ 6 ತಿಂಗಳವರೆಗೆ ಪ್ರತಿ ವಿದ್ಯಾರ್ಥಿ ಮನೆಗೆ 10 ಕೆಜಿ ಉಚಿತವಾಗಿ ಆಹಾರ ಧಾನ್ಯ ನೀಡಬೇಕು. ಆನ್ಲೈನ್ ಶಿಕ್ಷಣ ಕಡ್ಡಾಯ ಮಾಡಬಾರದು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಜಯಸೂರ್ಯ, ಅಬ್ದುಲ್ ಸುಭಾನ್, ಲಕ್ಷ್ಮಣ ಇತರರಿದ್ದರು.