ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಆಮಿಷ ಒಡ್ಡುವುದರ ಬಗ್ಗೆ ದೂರು ಕೇಳಿ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣೆಗಳು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಮತದಾರರಿಗೆ ಆಮಿಷ ಒಡ್ಡಲು ಅಕ್ರಮವಾಗಿ ವಸ್ತುಗಳು ಹಣ ಸಂಗ್ರಹಿಸಿಟ್ಟಿರುವ ಬಗ್ಗೆ ದೂರು ಕೇಳಿ ಬಂದರೆ ದಾಳಿ ನಡೆಸಿ ನಿಯಮಾನುಸಾರ ಎಫ್ಐಆರ್ ದಾಖಲು ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಚುನಾವಣೆಯ ಸಭೆ ಸಮಾರಂಭಗಳಲ್ಲಿ ಪ್ರಚೋಧನಕಾರಿ ಭಾಷಣ ಹಾಗೂ ಅಹಿತಕರ ಘಟನೆಗಳು ಕಂಡು ಬಂದರೆ ಆಯೋಜಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಅಬಕಾರಿ ಇಲಾಖೆಯ ಉಪ ಆಯುಕ್ತೆ ಮಹಾದೇವಿಬಾಯಿ ಮಾತನಾಡಿ, ಕಳೆದೊಂದು ವಾರದಲ್ಲಿ 129 ದಾಳಿ ನಡೆಸಿ 117 ಪ್ರಕರಣಗಳನ್ನು ಜಿಲ್ಲೆಯಲ್ಲಿ ದಾಖಲು ಮಾಡಲಾಗಿದೆ. 78.02 ಲೀ ಮದ್ಯ, 0.400 ಲೀ ಬೀಯರ್, 0.850 ಗ್ರಾಂ ಗಾಂಜಾ ಹಾಗೂ 3 ವಾಹನವನ್ನು ವಶಪಡಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ ಇತರರಿದ್ದರು.