More

    ದಾಖಲೆಯಿಲ್ಲದ ಹಣ ಸಾಗಾಟ ಮಾಡುವಂತಿಲ್ಲ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ

    ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಅನಧಿಕೃತವಾಗಿ ಚುನಾವಣಾ ವೆಚ್ಚವನ್ನು ತಡೆಗಟ್ಟಲು ಭಾರತ ಚುನಾವಣಾ ಆಯೋಗ ಕಾಯ್ದೆ ಹಾಗೂ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಮಾಡಲು ಸೂಚನೆ ನೀಡಿದೆ. ಅದರಂತೆ ಜಿಲ್ಲೆಯ ಸಾರ್ವಜನಿಕರಿಗೆ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಕೆಲ ಸೂಚನೆಯನ್ನು ವಿಧಿಸಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಆದೇಶ ಹೊರಡಿಸಿದ್ದಾರೆ.
    ಯಾವುದೇ ವ್ಯಕ್ತಿ ಮತ್ತೊಬ್ಬರಿಂದ 2 ಲಕ್ಷ ರೂಗಿಂತ ಹೆಚ್ಚಿನ ನಗದು ಹಣವನ್ನು ಒಂದು ಸಂದರ್ಭದಲ್ಲಿ ಗಿಫ್ಟ್ ರೂಪದಲ್ಲಿ ಪಡೆಯಲು ಅವಕಾಶವಿಲ್ಲ. ಒಬ್ಬ ವ್ಯಕ್ತಿ 10 ಸಾವಿರ ರೂಗಿಂತ ಹೆಚ್ಚಿನ ನಗದು ರೂಪದ ಹಣದ ವಹಿವಾಟು ಒಂದು ದಿನದಲ್ಲಿ ನಡೆಸಲು ಅವಕಾಶವಿರುವುದಿಲ್ಲ. ಸಾಗಣಿಕೆದಾರರಿಗೆ 35 ಸಾವಿರ ರೂವರೆಗೆ ಮಾತ್ರ ಬಳಕೆ ಮಾಡಬಹುದು. ಒಬ್ಬ ವ್ಯಕ್ತಿಯಿಂದ ಸಾಲ ಮರುಪಾವತಿ ಪಡೆಯುವಾಗ 20 ಸಾವಿರ ರೂಗಳನ್ನು ನಗದು ರೂಪದಲ್ಲಿ ಮಾತ್ರ ಪಡೆಯಬಹುದಾಗಿದೆ ಎಂದಿದ್ದಾರೆ.
    ಹಣದ ರೂಪದಲ್ಲಿ ಲಂಚ, ಬೆಲೆ ಬಾಳುವ ವಸ್ತು, ಗಿಫ್ಟ್ ವೋಚರ್ಸ್, ಸಿಮ್ ಕಾರ್ಡ್, ಉಚಿತ ಇಂಧನ, ಪ್ರವಾಸ ಕಾರ್ಯಕ್ರಮ, ಊಟದ ವ್ಯವಸ್ಥೆ, ಮದ್ಯ ಹಂಚಿಕೆ ಮೂಲಕ ಮತದಾರರನ್ನು ಸೆಳೆಯುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ವಹಿವಾಟಿನಲ್ಲಿ ಸಂಶಯಾಸ್ಪದವಾಗಿ ವಸ್ತುಗಳನ್ನು ದಾಸ್ತಾನು ಮಾಡುವುದು, ಸಾಗಾಣಿಕೆ ಮಾಡುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಿಗಾ ವಹಿಸಲು ಸೆಕ್ಟರ್ ಮ್ಯಾಜಿಸ್ಟ್ರೇಟ್, ಎಸ್‌ಎಸ್‌ಟಿ ತಂಡ, ಚೆಕ್‌ಪೋಸ್ಟ್, ವಿಎಸ್‌ಟಿ, ಪ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ. ಈ ವ್ಯಕ್ತಿಗಳು ದಾಖಲೆಗಳನ್ನು ಪರಿಶೀಲಿಸುವ ಸಂಧರ್ಭದಲ್ಲಿ ಸಹಕರಿಸಿ ಮುಕ್ತ, ನ್ಯಾಯಸಮ್ಮತ ಚುನಾವಣಾ ನಡೆಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
    ಪ್ರಮುಖವಾಗಿ ಸಾರ್ವಜನಿಕರು ಅಧಿಕೃತ ದಾಖಲೆ ಇಲ್ಲದೆ 50 ಸಾವಿರ ರೂಗಿಂತ ಹೆಚ್ಚಿನ ನಗದು ಇಟ್ಟಿಕೊಂಡು ಓಡಾಡಬಾರದು. ಸೂಕ್ತ ದಾಖಲೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ವಸ್ತುಗಳು/ಸರಕನ್ನು ಸಾಗಣಿಕೆ ಹಾಗೂ ದಾಸ್ತಾನು ಮಾಡಬಾರದು. ಇದನ್ನು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಅನುಸರಿಸಬೇಕು. ಒಂದು ವೇಳೆ ನಿಯಮಗಳ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಚುನಾವಣೆಯ ಮಾದರಿ ನೀತಿ ಸಂಹಿತೆ ಅಂತ್ಯವಾಗುವವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts