ದಾವಣಗೆರೆ : ರೈತರ ವಿರೋಧವನ್ನು ಕಟ್ಟಿಕೊಳ್ಳದೆ ಅವರ ಸಹಭಾಗಿತ್ವದಲ್ಲಿ ಕೈಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ರಾಜ್ಯ ರೈತ ಸಂಘ ಆಗ್ರಹಿಸಿದೆ.
ಸಂಘದ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.
ಭೂಮಿ ರೈತರ ಹೆಸರಿನಲ್ಲಿಯೇ ಇದ್ದು, 25 ವರ್ಷಗಳ ಕಾಲ ಲೀಸ್ ಅವಧಿ ಮೇರೆಗೆ ಪಡೆದು, ಕೈಗಾರಿಕೆ ಮತ್ತು ಆಭಿವೃದ್ಧಿಗೆ ಸರ್ಕಾರ ಮುಂದಾದಲ್ಲಿ ರೈತರ ಯಾವುದೇ ವಿರೋಧ ಇರುವುದಿಲ್ಲ ಎಂದು ತಿಳಿಸಿದರು.
ರೈತರ ಜಮೀನಿಗೆ ಆಯಾ ವಲಯಕ್ಕೆ ತಕ್ಕಂತೆ ಪ್ರತಿ ಎಕರೆಗೆ 2 ರಿಂದ 5 ಲಕ್ಷ ರೂ.ಗಳು ಮುಂಗಡವಾಗಿ ನೀಡಿ, ಕೈಗಾರಿಕೆಯ ಲಾಭದಲ್ಲಿ ರೈತನಿಗೆ ಶೇ. 20 ಹಣವನ್ನು ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಭೂಮಿಯನ್ನು ಕಳೆದುಕೊಂಡು ಭೂಪರಿಹಾರ ಪಡೆದ ಹಣ, ಸಕಾಲಕ್ಕೆ ಪರ್ಯಾಯ ಜಮೀನನ್ನು ಪಡೆಯಲು ಸಾಧ್ಯವಾಗುವುದಿಲ್ಲ ಹಾಗೂ ಹಣ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದರು.
ಆದ್ದರಿಂದ ರೈತರ ಸಹಭಾಗಿತ್ವದಲ್ಲಿ ಕೈಗಾರಿಕೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ನಡೆಸುವುದು ಹಾಗೂ ನಿರುದ್ಯೋಗ ಸಮಸ್ಯೆ, ರೈತರು ಭೂಮಿ ಕಳೆದುಕೊಳ್ಳುವ ಮತ್ತು ಆರ್ಥಿಕ ಸಮಸ್ಯೆ ಎಲ್ಲವೂ ಸ್ಪಷ್ಟವಾಗಿ ಬಗೆಹರಿದು, ಸರ್ಕಾರಕ್ಕೆ ಅತ್ಯುತ್ತಮ ಸೇವೆ ಮಾಡಲು ಅವಕಾಶವಾಗುತ್ತದೆ ಎಂದು ಹೇಳಿದರು. ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಮಾಜಿ ಶಾಸಕ ಬಿ.ಪಿ. ಹರೀಶ್ ಇತರರು ಇದ್ದರು.